ಬಳ್ಳಾರಿ: ದಾಖಲೆ ಇಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ 405 ಮಿಕ್ಸರ್ ಗ್ರೈಂಡರ್ಗಳನ್ನು ಬಳ್ಳಾರಿ ಗ್ರಾಮಾಂತರ ಪೊಲೀಸರು ಇತ್ತೀಚೆಗೆ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಹರಪನಹಳ್ಳಿಯ ಆರ್.ಬಿ ಟ್ರೇಡರ್ಸ್ ಮಾಲೀಕರು, ಲಾರಿ ಚಾಲಕ ಮಣಿಕಂಠನ್ (40) ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಮಿಕ್ಸರ್ ಗ್ರೈಂಡರ್ಗಳ ಮೌಲ್ಯ ₹5,25,690 ಎಂದು ಅಂದಾಜಿಸಲಾಗಿದೆ.
ತಮಿಳುನಾಡಿನ ಕೊಯಮತ್ತೂರಿನಿಂದ ಹರಪನಹಳ್ಳಿಯ ‘ಆರ್ಬಿ ಟ್ರೇಡರ್ಸ್’ ಮಾಲೀಕರಿಗೆ ಈ ಮಿಕ್ಸರ್ ಗ್ರೈಂಡರ್ಗಳನ್ನು ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ನಂತರ ಅವುಗಳನ್ನು ಕೊಪ್ಪಳ ಜಿಲ್ಲೆಯ ಹಿರೆಸಿಂದೋಗಿ ಗ್ರಾಮದ ರವಿಕುಮಾರ ಮತ್ತು ಉಮೇಶ (ನೋಂದಣಿ ಇಲ್ಲದ ಮಾರಾಟಗಾರರು) ಎಂಬುವರಿಗೆ ಮಾರಾಟ ಮಾಡಲು ಉದ್ದೇಶಿಸಲಾಗಿತ್ತು. ಈ ಪ್ರಕರಣದಲ್ಲಿ ಆರ್.ಬಿ ಟ್ರೇಡರ್ಸ್ನ ಜಿಎಸ್ಟಿ ಸಂಖ್ಯೆ ದುರುಪಯೋಗವಾಗಿರುವುದಾಗಿಯೂ, ಈ ವಸ್ತುಗಳ ಮಾರಾಟದಲ್ಲಿ ಸರ್ಕಾರಕ್ಕೆ ತೆರಿಗೆ ವಂಚನೆಯಾಗಿರುವುದಾಗಿಯೂ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಮಾರ್ಚ್28ರಂದು ಬಳ್ಳಾರಿ–ಬೆಂಗಳೂರು ರಸ್ತೆಯ ಹಲಕುಂದಿ ಬಳಿ ಸಾಗುತ್ತಿದ್ದ ಲಾರಿಯೊಂದನ್ನು ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಡೆದಿದ್ದರು. ಲಾರಿ ಚಾಲಕ ಮಣಿಕಂಠನನ್ನು ವಿಚಾರಣೆ ಮಾಡಿದಾಗ ಈ ವಿಷಯ ಬಯಲಾಗಿದೆ.
ಈ ಮಿಕ್ಸರ್ಗಳನ್ನು ಚುನಾವಣೆಯಲ್ಲಿ ಉಚಿತವಾಗಿ ಹಂಚಲು ತರಿಸಿಕೊಳ್ಳಲಾಗುತ್ತಿತ್ತು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸರಕು, ವಾಹನ ಮತ್ತು ವಶಕ್ಕೆ ಪಡೆದಿದ್ದ ವ್ಯಕ್ತಿಯನ್ನು ಚುನಾವಣಾ ಫ್ಲೈಯಿಂಗ್ ಸ್ಕ್ವಾಡ್ಗೆ ಹಸ್ತಾಂತರಿಸಿದ್ದಾರೆ. ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಪೊಲೀಸರಿಗೆ ವಹಿಸಿದ್ದಾರೆ.