ಹೊಸಪೇಟೆ: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ, ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುತ್ತಿರುವ ನಾಲ್ವರು ಪತ್ರಕರ್ತರಿಗೆ ತಲಾ ₹25 ಸಾವಿರ ನಗದು ಪರಿಹಾರವನ್ನು ಶಾಸಕ ಆನಂದ್ ಸಿಂಗ್ ಸೋಮವಾರ ವಿತರಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ನಾಲ್ವರು ಪತ್ರಕರ್ತರ ಕುರಿತು ಗಮನ ಸೆಳೆದಾಗ, ಅಲ್ಲಿಯೇ ಇದ್ದ ಆನಂದ್ ಸಿಂಗ್ ನೆರವಿನ ಭರವಸೆ ನೀಡಿದ್ದರು. 24 ಗಂಟೆ ಕಳೆಯುವುದರ ಒಳಗೆ ಪರಿಹಾರ ವಿತರಿಸಿ, ನುಡಿದಂತೆ ನಡೆದಿದ್ದಾರೆ.
ಈನಾಡು ತೆಲುಗು ಪತ್ರಿಕೆಯಲ್ಲಿ ಮೂರು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಈಗ ಆರ್ಥಿಕ ಸಂಕಷ್ಟದ ನಡುವೆ ಜೀವನ ಸಾಗಿಸುತ್ತಿರುವ ಪತ್ರಕರ್ತ ಓಂಕಾರ, ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತರಾದ ಪರಶುರಾಮ ಕಲಾಲ್, ಸಿ.ಕೆ. ನಾಗರಾಜ ಹಾಗೂ ಅಪಘಾತದಲ್ಲಿ ಗಾಯಗೊಂಡು ಕಾಲಿನ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಕರಾಮತ್ ಖವಾಸ್ ಅವರಿಗೆ ಆನಂದ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಅವರ ಅಳಿಯ, ಯುವ ಮುಖಂಡ ಸಂದೀಪ್ ಸಿಂಗ್ ಪರಿಹಾರ ವಿತರಿಸಿದರು.
ನಗರದ ರಾಣಿಪೇಟೆಯಲ್ಲಿನ ಓಂಕಾರ, ಬಸ್ ಡಿಪೊ ಹಿಂಭಾಗದಲ್ಲಿರುವ ಕರಾಮತ್ ಖವಾಸ್ ಅವರ ನಿವಾಸ, ತಾಲ್ಲೂಕಿನ ಮಲಪನಗುಡಿಯಲ್ಲಿ ಕಲಾಲ್ ಹಾಗೂ ಮರಿಯಮ್ಮನಹಳ್ಳಿಯಲ್ಲಿ ನಾಗರಾಜ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿಗೆ ಪರಿಹಾರ ವಿತರಿಸಿದರು.
ಸಂಘದ ಹೊಸಪೇಟೆ ಘಟಕದ ಅಧ್ಯಕ್ಷ ಹುಡೇಂ ಕೃಷ್ಣಮೂರ್ತಿ, ಮರಿಯಮ್ಮನಹಳ್ಳಿ ಘಟಕದ ಅಧ್ಯಕ್ಷ ಜಿ.ವಿ. ಸುಬ್ಬರಾವ್, ಪತ್ರಕರ್ತರಾದ ಪ್ರವೀಣ್ ದಲಬಂಜನ್, ಬಸಾಪುರ ಬಸವರಾಜ, ಸುಭಾನಿ ಪಿಂಜಾರ, ಗಾಳೆಪ್ಪ, ರಾಮಜೀ ನಾಯ್ಕ, ಭೀಮಾ ನಾಯ್ಕ, ಪ್ರಭಾಕರ್, ಬಿ. ಬಾಬುಕುಮಾರ ಇದ್ದರು.