ಅರಸೀಕೆರೆ: ಹೋಬಳಿಯ ವ್ಯಾಪ್ತಿಯಲ್ಲಿ ಬಿಸಿಲ ಪ್ರಖರತೆ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದು, ಬಿಸಿಲು ಲೆಕ್ಕಿಸದೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಮಾಜಿ ಶಾಸಕ ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಬಿರುಸಿನ ಪ್ರಚಾರ ನಡೆಸಿದರು.
ರಾಮನಗರ, ಫಣಿಯಪುರ, ಕುರೆ ಮಾಗನಹಳ್ಳಿ, ರಾಮಘಟ್ಟ ಚಟ್ನಿಹಳ್ಳಿ, ಅಣಜಿಗೆರೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮತಯಾಚನೆ ಮಾಡಿದರು. ಅಣಜಿಗೆರೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷ ತೊರೆದು 50ಕ್ಕೂ ಹೆಚ್ಚು ಬೆಂಬಲಿಗರು ಬಿಜೆಪಿಗೆ ಸೇರ್ಪಡೆಗೊಂಡರು.
ಮಾಜಿ ಶಾಸಕ ಎಸ್.ವಿ ರಾಮಚಂದ್ರ ಮಾತನಾಡಿ, ‘ಕೇಂದ್ರ ಸರ್ಕಾರದಿಂದ ಬಿಡುಗಡೆಯಾದ ಬರ ಪರಿಹಾರದ ಹಣ ರೈತರಿಗೆ ಅನುಕೂಲ ಆಗಲಿದೆ. ಏ.28 ರಂದು ದಾವಣಗೆರೆ ಜಿಲ್ಲೆಗೆ ಪ್ರಧಾನಿ ಮೋದಿ ಆಗಮಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಬೇಕು ಎಂದರು.
ಮಾಜಿ ಶಾಸಕ ಎಚ್.ಪಿ ರಾಜೇಶ್, ‘ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ವೇತನ, ದಿನ ನಿತ್ಯದ ಸಾಮಗ್ರಿ, ರೈತ ಬಳಕೆಯ ಟಿ.ಸಿ, ಮೋಟರ್ ದರ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆರ್ಥಿಕ ದಿವಾಳಿ ಮಾಡಿದೆ ಎಂದು ಕಿಡಿ ಕಾರಿದರು.
ಪ್ರಪಂಚಕ್ಕೆ ಮಾದರಿ ರಾಷ್ಟ್ರ ನಿರ್ಮಾಣದ ಮೋದೀಜಿ ಕನಸಿಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಮತದಾನ ಮಾಡುವ ಮೂಲಕ ಸಾಕಾರಗೊಳಿಸಿಬೇಕು ಎಂದರು.
‘ಎಸ್.ವಿ ರಾಮಚಂದ್ರ ಹಾಗೂ ಎಚ್.ಪಿ ರಾಜೇಶ್ ಕ್ಷೇತ್ರದ ಜೋಡೆತ್ತುಗಳಾಗಿ ಸಂಘಟನೆಯಲ್ಲಿ ತೊಡಗಿದ್ದು, ಬಿಜೆಪಿ ಅಭ್ಯರ್ಥಿ ಗೆಲುವಿಗೆ ಮಹತ್ವದ ಮತಗಳಿಕೆಗೆ ಸಹಕಾರಿ ಆಗಲಿದೆ’ ಎಂದು ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕಲ್ಲೇ ರುದ್ರೇಶ್ ಹೇಳಿದರು.
ಈ ಸಂದರ್ಭದಲ್ಲಿ ಜಿ.ಎಂ ಅನಿತ್ ಕುಮಾರ್, ಪಲ್ಲಗಟ್ಟಿ ಮಹೇಶ್, ಚಟ್ನಿಹಳ್ಳಿ ರಾಜಣ್ಣ, ಫಣಿಯಾಪುರ ಲಿಂಗರಾಜ, ಬಸವರಾಜ, ನಾಗನಗೌಡ, ವಿಜಯ್ ಕುಮಾರ್, ಕಲ್ಲಹಳ್ಳಿ ಸುರೇಶ, ಏಕಾಂತಪ್ಪ, ಕೆ.ಎನ್ ಪ್ರಕಾಶ್, ಹನುಮಂತನಾಯ್ಕ ಇದ್ದರು.