ಹೊಸಪೇಟೆ: ತಾಲ್ಲೂಕಿನ ಹಂಪಿ ವಿರೂಪಾಕ್ಷೇಶ್ವರ ದೇಗುಲದಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಭಕ್ತಿ ಭಾವನಾ ಕಾರ್ಯಕ್ರಮದಲ್ಲಿ ಫ್ರಾನ್ಸ್ನ ಟೋನಿ ಅವರು ಗಿಟಾರ್ ನುಡಿಸಿ ಗಮನ ಸೆಳೆದರು.
ಮೀರಾ ಅವರು ಪುರಂದರದಾಸರ ‘ನಿನ್ನನೆ ನಂಬಿದೆನೋ ರಂಗಯ್ಯ ರಂಗ’, ‘ನಮ್ಮಮ್ಮ ಶಾರದೆ ಉಮಾಮಹೇಶ್ವರಿ’ ಎಂಬ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಅಂಗಡಿ ಸಮರ್ಥ, ವಚನಗಳು ಹಾಗೂ ಸಂತ ಶಿಶುನಾಳ ಶರೀಫ ಅವರ ತತ್ವಪದಗಳನ್ನು ಹಾಡಿದರು. ಇದರ ಮಧ್ಯೆ ಟೋನಿ ಅವರು ಗಿಟಾರ್ ನುಡಿಸಿ ಅಲ್ಲಿದ್ದವರನ್ನು ತಲೆದೂಗುವಂತೆ ಮಾಡಿದರು. ಹುಚ್ಚಯ್ಯ ತಬಲ ನುಡಿಸಿದರು.
ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿಯವರು ‘ಶಿವಮಹಿಮೆ’ ಕುರಿತು ಪ್ರವಚನ ನೀಡಿದರು. ಮರಿದೇವ ಸಂಗೀತ ಸಾಂಸ್ಕೃತಿಕ ಕಲಾವೃಂದದ ಸಂಸ್ಥಾಪಕ ಅಧ್ಯಕ್ಷ ಅಂಗಡಿ ವಾಮದೇವ, ದೇಗುಲದ ಬಿ.ಜೆ. ಶ್ರೀನಿವಾಸ ಪಂಪಣ್ಣ, ರಾಘವೇಂದ್ರ ಶೆಟ್ಟಿ, ಕೇಶವರಾಜ್ ಇದ್ದರು.