ಕೊಟ್ಟೂರು: ತಾಲ್ಲೂಕಿನ ಉಜ್ಜಯಿನಿ ಗ್ರಾಮದ ಹೊರವಲಯದ ಸರ್ಕಾರಿ ಆಸ್ಪತ್ರೆಯ ಬಳಿ ಭಾನುವಾರ ಬೆಳಗಿನ ಜಾವ ಕಾರೊಂದು ರಸ್ತೆ ಬದಿಯ ನೀರಿನ ಗುಂಡಿಗೆ ಬಿದ್ದು ಮುಳುಗಿದ ಪರಿಣಾಮ ಶಿಕ್ಷಕರೊಬ್ಬರು ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ನಡೆದಿದೆ.
ಪಟ್ಟಣದ ಕೊಟ್ಟೂರೇಶ್ವರ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಎಂ. ಪ್ರಕಾಶ್ (55) ಮೃತಪಟ್ಟವರು.
ಪ್ರಕಾಶ್ ಅವರು ತಮ್ಮ ಸ್ವಂತ ಊರಾದ ಜಗಳೂರು ತಾಲ್ಲೂಕಿನ ಹೊಸಕೆರೆ ಗ್ರಾಮದಿಂದ ತಂದೆ ಕೆ.ಎಂ. ಶರಣಯ್ಯ ಹಾಗೂ ತಾಯಿ ಸುವರ್ಣಮ್ಮ ಅವರೊಂದಿಗೆ ಕಾರಿನಲ್ಲಿ ಕೊಟ್ಟೂರಿಗೆ ಬರುತ್ತಿದ್ದಾಗ, ರಸ್ತೆಯಲ್ಲಿ ನಾಯಿ ಅಡ್ಡ ಬಂದಿದ್ದರಿಂದ ಕಾರಿಗೆ ಬ್ರೇಕ್ ಹಾಕಿದರು. ಆಗ ಕಾರು ಪಲ್ಟಿ ಹೊಡೆದು ರಸ್ತೆಯ ಪಕ್ಕದ ನೀರಿನ ಗುಂಡಿಗೆ ಬಿದ್ದಿತು. ಕಾರಿನಲ್ಲಿ ನೀರು ತುಂಬಿ ಪ್ರಕಾಶ್ ಅವರು ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಮೃತರ ತಂದೆ ತಾಯಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.