ವಿಜಯನಗರ (ಹೊಸಪೇಟೆ): ತಾಯಮ್ಮ ಶಕ್ತಿ ಯುವಕರ ಸಂಘದಿಂದ ಹಮ್ಮಿಕೊಂಡಿರುವ ಕ್ರಿಕೆಟ್ ಟೂರ್ನಮೆಂಟ್ ಭಾನುವಾರ ನಗರದ ಟಿ.ಬಿ. ಡ್ಯಾಂ ವಂಕಾಯಿ ಕ್ಯಾಂಪ್ ಮೈದಾನದಲ್ಲಿ ಆರಂಭಗೊಂಡಿತು.
ಟೂರ್ನಮೆಂಟ್ ಆರಂಭಕ್ಕೂ ಮುನ್ನ ನಗರದ ರಾಣಿಪೇಟೆಯಿಂದ ಮೈದಾನದ ವರೆಗೆ ಬೈಕ್ ರ್ಯಾಲಿ ನಡೆಸಿದರು. ಬಳಿಕ ಪಂದ್ಯಾವಳಿ ಉದ್ಘಾಟಿಸಿದ ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ್ ಸಿಂಗ್, ‘ತಾಯಮ್ಮ ಮಹಿಳಾ ಶಕ್ತಿ ಸಂಘದ ಜೊತೆ ಯುವಕರ ಸಂಘ ಕೂಡ ಸ್ಥಾಪಿಸಲಾಗಿದೆ. ಯುವಕರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಂಘ ಮಾಡಲಾಗಿದೆ. ಕ್ರಿಕೆಟ್ ಟೂರ್ನಮೆಂಟ್ ಮೂಲಕ ಇದರ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.
‘ಕ್ರೀಡೆಗಳ ಮೂಲಕ ಯುವಕರನ್ನು ಮುನ್ನೆಲೆಗೆ ತಂದು ಅವರ ಸಾಮರ್ಥ್ಯವನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ಯುವಕರು ಟೂರ್ನಮೆಂಟ್ನಲ್ಲಿ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ ಕೌಶಲ ಪ್ರದರ್ಶಿಸಬೇಕು’ ಎಂದು ತಿಳಿಸಿದರು.
ಪಂದ್ಯಾವಳಿಯಲ್ಲಿ ಒಟ್ಟು 25 ತಂಡಗಳು ಪಾಲ್ಗೊಂಡಿದ್ದು, ಫೆ. 28ರಂದು ಅಂತಿಮ ಪಂದ್ಯ ನಡೆಯಲಿದೆ. ಟಿ.ಬಿ ಡ್ಯಾಂ ಎಸ್ಐ ಬಿ.ಡಿ.ರಜಪೂತ್, ಉದ್ಯಮಿಗಳಾದ ಪ್ರಿಯಾಂಕ ಜೈನ್, ಗೋಪಿ, ದೀಪಕ್ ರಾಜ್, ಗೋವಿಂದ, ಲಲಿತ ನಾಯಕ ಇದ್ದರು.