ಬಳ್ಳಾರಿ: ಇಲ್ಲಿನ ಜಾಗೃತಿ ನಗರದ ಹೊಂಡದಲ್ಲಿ ಈಚೆಗೆ ಜನರಿಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಮೊಸಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಸೆರೆಹಿಡಿದರು.
ಕಳೆದ ನಾಲ್ಕೈದು ದಿನಗಳಿಂದ ಎರಡು ಮೊಸಳೆಗಳು ಸ್ಥಳೀಯರ ಕಣ್ಣಿಗೆ ಬಿದ್ದಿದ್ದವು. ಈಗ ಒಂದನ್ನು ಸೆರೆಹಿಡಿದಿರುವುದರಿಂದ ಜನರು ನಿಟ್ಟಸಿರು ಬಿಟ್ಟಿದ್ದಾರೆ. ಮೂರು ದಿನಗಳಿಂದ ಮೊಸಳೆ ಸೆರೆಹಿಡಿಯಲು ತಜ್ಞರು ಸೇರಿ ಅರಣ್ಯ ಇಲಾಖೆಯ ಹದಿನೈದು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಸೆರೆ ಸಿಕ್ಕಿರುವ ಮೊಸಳೆಯನ್ನು ಕಮಲಾಪುರ ಮೃಗಾಲಯಕ್ಕೆ ಸ್ಥಳಾಂತರಿಸಲಾಗಿದೆ. ಇನ್ನೂಂದು ಮೊಸಳೆ ಕಂಡು ಬಂದರೆ ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ರಾಘವೇಂದ್ರ ತಿಳಿಸಿದರು.