ಹೊಸಪೇಟೆ (ವಿಜಯನಗರ): ನಿವೇಶನ, ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಪುನರ್ವಸತಿ ಕಲ್ಪಿತ ದೇವದಾಸಿಯರು ಹಾಗೂ ಗ್ರಾಮೀಣ ಕೂಲಿಕಾರ್ಮಿಕರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಧಿಕಾರಿ ಹೆಸರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು. ಜಿಲ್ಲೆಯಲ್ಲಿ ನೂರಾರು ಜನ ಪುನರ್ವಸತಿ ಕಲ್ಪಿತ ದೇವದಾಸಿಯರು ಇದ್ದಾರೆ. ಅವರಿಗೆ ನಿವೇಶನ, ಮನೆಗಳಿಲ್ಲ. ಗೌರವಯುತ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಹೊಟ್ಟೆ ಪಾಡಿಗೆ ಕೂಲಿ ಕೆಲಸ ಮಾಡುತ್ತಿದ್ದಾರೆ. ದೇವದಾಸಿಯರಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದರೂ ಅವುಗಳು ಅವರಿಗೆ ತಲುಪುತ್ತಿಲ್ಲ ಎಂದು ತಿಳಿಸಿದರು.
2018ರಲ್ಲಿ ನಿವೇಶನ, ವಸತಿ ರಹಿತರ ಪಟ್ಟಿ ತಯಾರಿಸಲಾಗಿದ್ದು, ಅದು ಅವೈಜ್ಞಾನಿಕವಾಗಿದೆ. ಅದರಲ್ಲಿ ಅನೇಕರ ಹೆಸರುಗಳು ಬಿಟ್ಟು ಹೋಗಿವೆ. ಹೊಸದಾಗಿ ಹೆಸರು ಸೇರ್ಪಡೆಗೆ ಅವಕಾಶ ಕಲ್ಪಿಸಬೇಕು. ನಿವೇಶನ, ವಸತಿ ಸೌಲಭ್ಯ ಕಲ್ಪಿಸಿ ಸ್ವಾಭಿಮಾನದ ಬದುಕು ನಡೆಸಲು ಆಸ್ಪದ ಮಾಡಿಕೊಡಬೇಕು. ಎಲ್ಲ ಸೌಲಭ್ಯ ವಂಚಿತರಿಗೆ ಸರ್ಕಾರದ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.