ಹೊಸಪೇಟೆ: ‘ವಾಲ್ಮೀಕಿ, ಭೋವಿ, ವಡ್ಡರುಸೇರಿದಂತೆ ಶೇ 68ರಷ್ಟಿರುವ ದಲಿತ ಸಮುದಾಯಗಳು ದೇಶಕ್ಕೆ ವಲಸೆ ಬಂದವರು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷಜೀ ನೀಡಿರುವ ಹೇಳಿಕೆ ಸರಿಯಲ್ಲ’ ಎಂದು ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಆಕ್ಷೇಪ ವ್ಯಕ್ತಪಡಿಸಿದರು.
ಗುರುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಯಾವುದೇ ಸಮಾಜದ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಬೇಕು. ಸಂತೋಷಜೀ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ರಾಜ್ಯದಾದ್ಯಂತ ವಾಲ್ಮೀಕಿ ಸಮಾಜದಿಂದ ಹೋರಾಟ ನಡೆಸಲಾಗುವುದು’ ಎಂದರು.
‘ಬಿ. ಶ್ರೀರಾಮುಲು ಅಥವಾ ರಮೇಶ ಜಾರಕಿಹೊಳಿ ಪೈಕಿ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುವುದು ಎಂದು ಬಿಜೆಪಿ ಮುಖಂಡರೇ ಹೇಳಿದ್ದಾರೆ. ಈಗ ಅವರು ಅವರ ಮಾತು ಉಳಿಸಿಕೊಳ್ಳಬೇಕು. ಈ ಕುರಿತು ಮಹರ್ಷಿ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಕೂಡ ಈ ಹಿಂದೆ ಸಿ.ಎಂ.ಗೆ ಮನವಿ ಮಾಡಿದ್ದರು’ ಎಂದು ನುಡಿದರು.
‘ರಾಜ್ಯದಲ್ಲಿ ಬಿಜೆಪಿ 105 ಶಾಸಕರನ್ನು ಗೆಲ್ಲಲು ವಾಲ್ಮೀಕಿ ಸಮಾಜದ ಕೊಡುಗೆ ದೊಡ್ಡದಿದೆ. ಸಮಾಜವನ್ನು ಕೇವಲ ಮತ ಬ್ಯಾಂಕ್ ಆಗಿ ಬಳಸಿಕೊಳ್ಳಬಾರದು. ಅದಕ್ಕೆ ಸೂಕ್ತ ಸ್ಥಾನಮಾನ ಕೊಡಬೇಕು’ ಎಂದರು.
ಪ್ರಕರಣಕ್ಕೆ ಆಗ್ರಹ:‘ದಲಿತರನ್ನು ಅಪಮಾನಿಸಿ ಹೇಳಿಕೆ ಕೊಟ್ಟಿರುವ ಬಿ.ಎಲ್.ಸಂತೋಷಜೀ ವಿರುದ್ಧ ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಶುಕ್ರವಾರ (ಜ.31) ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವವರೆಗೆ ರಾಜ್ಯದಾದ್ಯಂತ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು’ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ದುರುಗಪ್ಪ ಪೂಜಾರಿ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಸಂತೋಷಜೀ ನೀಡಿರುವ ಹೇಳಿಕೆಯ ವಿಡಿಯೊ ಅನ್ನು ಸ್ವತಃ ಬಿಜೆಪಿಯೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದೆ. ಈ ಕುರಿತು ಯಾವುದೇ ಮಾಧ್ಯಮ ವರದಿ ಮಾಡದೇ ಇರುವುದು ದುರದೃಷ್ಟಕರ’ ಎಂದರು.