ಕಂಪ್ಲಿ: ‘ಜೆಡಿಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಕೆ.ಎಂ. ಹೇಮಯ್ಯಸ್ವಾಮಿ ಅವರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ’ ಜೆಡಿಎಸ್ ಕಂಪ್ಲಿ ವಿಧಾನಸಭಾಕ್ಷೇತ್ರ ಅಧ್ಯಕ್ಷ ಕೆ.ಎಸ್. ಚಾಂದ್ಬಾಷಾ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಜನತಾಪಕ್ಷ, ಸಂಯುಕ್ತ ಜನತಾದಳ, ಜನತಾ ಪರಿವಾರ ಸೇರಿದಂತೆ ಜೆಡಿಎಸ್ ಪಕ್ಷದಲ್ಲಿ ಕಳೆದ ನಾಲ್ಕು ದಶಕಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ನಂತರ ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟಿಸುತ್ತಾ ಜೊತೆಗೆ ಮೂರು ಬಾರಿ ಕಂಪ್ಲಿ ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇದೆಲ್ಲವನ್ನು ಪರಿಗಣಿಸಿ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ನೀಡುವಂತೆ’ ಮನವಿ ಮಾಡಿದರು.
ತಾಲ್ಲೂಕು ಪಂಚಾಯಿತ ಸದಸ್ಯ ಕೆ. ಷಣ್ಮುಖಪ್ಪ ಮತ್ತು ಪುರಸಭೆ ಮಾಜಿ ಅಧ್ಯಕ್ಷ ಅಯ್ಯೋದಿ ವೆಂಕಟೇಶ್ ಮಾತನಾಡಿ, ‘ಹೇಮಯ್ಯಸ್ವಾಮಿ ಅವರಿಗೆ ನಿಗಮ ಸ್ಥಾನ ನೀಡುವುದರಿಂದ ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚು ಸಂಘಟಿಸಲು ಅನುಕೂಲವಾಗುತ್ತದೆ. 1993ರಲ್ಲಿ ಸ್ವಾಮಿ ಅವರು ಜನತಾದಳ ತಾಲ್ಲೂಕು ಅಧ್ಯಕ್ಷರಾಗಿದ್ದಾಗ 4ಜಿಲ್ಲಾ ಪಂಚಾಯಿತಿ, 13ತಾಲ್ಲೂಕು ಪಂಚಾಯಿತಿ ಸ್ಥಾನದಲ್ಲಿ ಗೆಲುವು, ಹೊಸಪೇಟೆ ನಗರ ಸಭೆ, ಕಂಪ್ಲಿ ಪುರಸಭೆ ಹಾಗೂ ಕಮಲಾಪುರ ಪಟ್ಟಣ ಪಂಚಾಯ್ತಿಯಲ್ಲಿ ಜೆಡಿಎಸ್ ಅಧಿಕಾರ ಚುಕ್ಕಾಣಿ ಹಿಡಿದಿತ್ತು’ ಎಂದು ಸ್ಮರಿಸಿದರು.
ಜೆಡಿಎಸ್ ನಗರ ಘಟಕ ಅಧ್ಯಕ್ಷ ಎಂ.ಸಿ. ಮಾಯಪ್ಪ, ಕೆ. ಮೆಹಬೂಬ್, ಕೊಟ್ಟೂರು ರಮೇಶ್, ಎಂ. ಮೌನುದ್ದೀನ್, ಸುಧಾಕರ, ಫ್ರಾನ್ಸೀಸ್, ಕೆ. ವೀರೇಶ್, ಡಿ. ಮುರಾರಿ, ರಾಜು, ಟಿ. ವಿರೂಪಣ್ಣ, ಗೋಪಾಲ, ಬಾಬು, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.