ಬಳ್ಳಾರಿ: ನಗರದ ತಿಲಕ್ನಗರದಲ್ಲಿರುವ ಭವಾನಿ ಕಲಾಮಂದಿರದ ರಜತಮಹೋತ್ಸವದ ಅಂಗವಾಗಿ ಅಲ್ಲಿ ಬುಧವಾರದಿಂದ ಕಿನ್ನಾಲ ಕಲೆ ತರಬೇತಿ ಶಿಬಿರಕ್ಕೆ ಕಲಾವಿದ ಹೇಮಣ್ಣ ಚಿತ್ರಗಾರ ಚಾಲನೆ ನೀಡಿದರು.
‘ಚಿತ್ರ ಮತ್ತು ಶಿಲ್ಪದ ಸಂಗಮವಾದ ಈ ಕಲೆ ವಿಜಯನಗರ ಅರಸರ ಕಾಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿತ್ತು. ಚಿತ್ರಕಲಾ ವಿದ್ಯಾರ್ಥಿಗಳು ಈ ಶೈಲಿಯನ್ನು ಕಲಿತು, ಬಳಸಬೇಕು’ ಎಂದು ಅವರು ಹೇಳಿದರು.
‘ಅರಸರ ಕಾಲದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಈ ಚಿತ್ರಗಾರ ಕುಟುಂಬಗಳು ನಂತರ ಆಂಧ್ರ ಮತ್ತು ಕರ್ನಾಟಕದ ನಾನಾ ಪ್ರದೇಶಗಳಿಗೆ ವಲಸೆ ಹೋದರು. ಬಹುತೇಕರು ಕಸುಬನ್ನು ಮುಂದುವರಿಸಲಿಲ್ಲ. ಆದರೆ ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ಹೋದವರು ಕಸುಬನ್ನು ಮುಂದುವರಿಸಿದರು’ ಎಂದು ಸ್ಮರಿಸಿದರು.
‘ನಾಲ್ಕು ದಿನದ ಶಿಬಿರದಲ್ಲಿ ಕಿನ್ನಾಳ ಶಿಲ್ಪ ರಚಿಸುವ ಕಲೆಯನ್ನು ಹೇಳಿಕೊಡಲಾಗುವುದು. ಸಂಪ್ರದಾಯಬದ್ಧ ಶೈಲಿಯನ್ನು ಹೊಸ ತಲೆಮಾರು ಆಸಕ್ತಿಯಿಂದ ಕಲಿಯಬೇಕು’ ಎಂದರು.
ಕಲಾಮಂದಿರದ ವ್ಯವಸ್ಥಾಪಕ ಆರ್.ಎಲ್.ಜಾಧವ್, ಆರ್ಯ ಈಡಿಗ ವಿದ್ಯಾರ್ಥಿ ವಸತಿ ನಿಲಯದ ಅಧ್ಯಕ್ಷ ಶ್ರೀನಾಥ, ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಯು.ರಮೇಶ್ ಮತ್ತು ಚಿತ್ರಕಲಾ ಶಿಕ್ಷಕ ಕೆ.ಬಿ.ಸಿದ್ದಲಿಂಗಪ್ಪ ಇದ್ದರು. ಮಂದಿರದ 22 ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.