ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಟ್ಟೆಗಂಟಿದ ಬೆಂಕಿ’ ಕವನ ಸಂಕಲನ ಬಿಡುಗಡೆ

Last Updated 31 ಅಕ್ಟೋಬರ್ 2022, 12:50 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಯುವಕವಿ ವಿಶಾಲ್‌ ಮ್ಯಾಸರ್‌ ಅವರ ‘ಬಟ್ಟೆಗಂಟಿದ ಬೆಂಕಿ’ ಕವನ ಸಂಕಲನ ಬಿಡುಗಡೆ ಸಮಾರಂಭ ನಗರದಲ್ಲಿ ಶನಿವಾರ ಸಂಜೆ ನಡೆಯಿತು.

ಪುಸ್ತಕ ಬಿಡುಗಡೆಗೊಳಿಸಿದ ಸಾಹಿತಿ ಮಹಾಂತೇಶ್ ನವಲಕಲ್ ಮಾತನಾಡಿ, ವಿಶಾಲ್ ಅವರ ಕವಿತೆಗಳು ಅನನ್ಯ, ಜನ ಭಾಷೆ ಹಾಗೂ ಜನ ಸಂಸ್ಕೃತಿಯ ಆಳದ ಜ್ಞಾನದಿಂದ ಮೂಡಿಬಂದಿವೆ. ಇತಿಹಾಸದಲ್ಲಿ ಕಡೆಗಣಿಸಲಾದ ಜನ ಸಂಸ್ಕೃತಿಯನ್ನು ಕೇಂದ್ರವಾಗಿಸಿಕೊಂಡು ವಿಶಾಲ್ ಕಾವ್ಯ ಭಾಷೆಯೊಂದಿಗೆ ಸಂವಾದಿಸಿರುವುದು ಸಾಹಿತ್ಯ ಕಾರಣಕ್ಕೆ ಮುಖ್ಯವಾಗುತ್ತದೆ ಎಂದರು.

ಅಷ್ಟೇ ಅಲ್ಲ, ಬುದ್ಧ-ಬಸವ-ಅಂಬೇಡ್ಕರ್ ದರ್ಶನ ಇವತ್ತಿನ ಪರಿಸ್ಥಿತಿಗೆ ಎಷ್ಟು ಅನಿವಾರ್ಯ ಎಂಬುದನ್ನು ಹೊಸ ಪರಿಭಾಷೆಯಲ್ಲಿ ಕಟ್ಟಿಕೊಟ್ಟಿರುವುದು ಅವರ ಕವನ ಸಂಕಲನದ ಹೆಗ್ಗಳಿಕೆಯಾಗಿದೆ. ಲೇಖಕನಿಗಿರಬೇಕಾದ ಸಾಮಾಜಿಕ ಜವಾಬ್ದಾರಿ, ಬಹಿರಂಗವನ್ನು ಅಂತರಂಗಕ್ಕೆ ಒಗ್ಗಿಸಿಕೊಳ್ಳುವ ಕಲೆ ಈ ಸಂಕಲನದಲ್ಲಿ ಹದಗೊಂಡಿದೆ. ಯಾವುದೇ ಕವಿಯ ಒಂದು ಕಾವ್ಯ ಇಡಿಯಾಗಿ ನೋಡುವುದಕ್ಕಿಂತ ಕವಿ ಕಟ್ಟಿಕೊಡುವ ಮುಖ್ಯ ಸಾಲುಗಳು ಆ ಕವಿತೆಯ ಸಮಗ್ರ ಒಳನೋಟವನ್ನು ಒದಗಿಸುತ್ತದೆ ಎಂದರು.

ವಿಶಾಲ್‌ ಅವರ ಕವಿತೆಗಳು ವಯಸ್ಸಿಗೆ ಮೀರಿದ ಚಿಂತನೆಗಳಾಗಿವೆ. ಜನ ಸಂಸ್ಕೃತಿಯ ಆಳವಾದ ಅಧ್ಯಯನಗಳು ಕವಿತೆಯ ರೂಪ ಪಡೆದಿವೆ ಎಂದು ಆರನಕಟ್ಟೆ ರಂಗನಾಥ್ ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಪಿ.ಆರ್. ವೆಂಕಟೇಶ್, ಕವಿ ಎಸ್.ಬಿ.ಚಂದ್ರಶೇಖರ್, ಸ್ಫೂರ್ತಿ ವೇದಿಕೆಯ ಬಿಸಾಟಿ ತಾಯಪ್ಪ ನಾಯಕ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಶಿವಕುಮಾರ್, ಅಂಬೇಡ್ಕರ್ ಸಂಘದ ಜಿಲ್ಲಾ ಅಧ್ಯಕ್ಷ ಉಮಾಪತಿ ಪದ್ಮನಾಭನ್, ಕವಿ ವೀರೇಂದ್ರ ರಾವಿಹಾಳ್ ಇದ್ದರು. ಭಾರತಿ ಮೂಲಿಮನಿ, ಯು.ಶ್ರೀನಿವಾಸ್ ಮೂರ್ತಿ, ಡಿ. ಬಸಂತ್, ಮಂಗಳ. ಎಂ. ಎಲ್, ರಾಜಪ್ಪ ಅವರು ಕವಿತೆ ವಾಚನ ಮಾಡಿದರು. ಕವಿ ಬಿ.ಪೀರ್ ಬಾಷ, ಟಿ.ಎಂ. ಉಷಾರಾಣಿ, ಲೇಖಕ ದಯಾನಂದ ಕಿನ್ನಾಳ, ಪ್ರಾಧ್ಯಾಪಕ ಚಂದ್ರಶೇಖರ ಶಾಸ್ತ್ರಿ, ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಲ್ಯಾ ನಾಯ್ಕ, ಬಂಡಾಯ ಸಾಹಿತ್ಯ ಸಂಘಟನೆಯ ಎಂ. ಉಮಾಮಹೇಶ್ವರ್, ಜಯಸೂರ್ಯ, ಎನ್. ನಾಗರಾಜ್, ಜಿ. ಯರ್ರಿಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT