ಕೊಟ್ಟೂರು: ನಾಡಿನ ನೈಜವಾದ ಘಟನಾವಳಿ ಮತ್ತು ಇತಿಹಾಸವನ್ನು ದಾಖಲಿಸುವಲ್ಲಿ ನಮ್ಮ ವಿದ್ವಾಂಸರು ಎಡವಿದ್ದಾರೆ ಎಂದು ಉಜ್ಜಿನಿ ಸದ್ಧರ್ಮ ಪೀಠದ ಸಿದ್ಧಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ಬುಧವಾರ ಪತ್ರಕರ್ತರ ಉಜ್ಜಿನಿ ರುದ್ರಪ್ಪ ಅವರು ರಚಿಸಿರುವ `ಕೌತುಕ~ ಪುಸ್ತಕ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ರಾಜರ ಆಶ್ರಯದಲ್ಲಿದ್ದ ವಿದ್ವಾಂಸರು ಆತನನ್ನು ಸಂಪ್ರೀತಗೊಳಿಸಲು ನೈಜ ಘಟನಾವಳಿ ಗಳನ್ನು ಮತ್ತು ಇತಿಹಾಸವನ್ನು ಬದಿಗೊತ್ತಿದ್ದ ರಿಂದ ನಾಡಿನ ನೈಜವಾದ ಘಟನೆ, ಇತಿಹಾಸ ಅಸ್ಪಷ್ಟ ವಾಗಿದೆ. ಹೊರದೇಶದ ವಿದ್ವಾಂಸರು ಮತ್ತು ಪ್ರವಾಸಿಗರು ಬರೆದಿರುವ ಪುಸ್ತಕಗಳಿಂದ ನಾಡಿನ ಸ್ಪಷ್ಟ ಮಾಹಿತಿ ದೊರಕುತ್ತಿದೆ ಎಂದರು.
ಕೌತುಕ ಪುಸ್ತವನ್ನು ಬಿಡುಗಡೆ ಮಾಡಿ ಮಾತನಾಡಿದ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕುಂ. ವೀರಭದ್ರಪ್ಪ, ಸುದ್ದಿ ಬರೆಯುವುದಷ್ಟೆ ಪತ್ರಕರ್ತನ ಕರ್ತವ್ಯವಲ್ಲ. ಇತಿಹಾಸ ಪ್ರಜ್ಞೆಯೂ ಇರಬೇಕು. ಆಗ ಮಾತ್ರ ಇಂತಹ ಕೃತಿ ಹೊರಬರಲು ಸಾಧ್ಯ ಎಂದರು.
ಕೃತಿ ಕುರಿತು ಮಾತನಾಡಿದ ಡಾ. ವೆಂಕಟಗಿರಿ ದಳವಾಯಿ, ಪತ್ರಕರ್ತರಿಗೆ ಸಮಾಜದ ಒಳ ನೋಟಗಳಿದ್ದರೆ, ಸುದ್ದಿಗಳ ಹೊರತಾಗಿಯೂ ಶೋಷಿತರು ಮತ್ತು ದೌರ್ಜನ್ಯಕ್ಕೆ ಒಳಗಾದ ವರಿಗೆ ಧ್ವನಿಯಾಗಿ ಬರೆಯಬಲ್ಲ ಎಂಬುದಕ್ಕೆ ಈ ಕೃತಿಯೇ ಸಾಕ್ಷಿ ಎಂದು ಹೇಳಿದರು.
ಈ ಕೃತಿಯಲ್ಲಿನ ದೇವದಾಸಿಯನ್ನು ಮೆಟ್ಟಿನಿಂತ ಪಾರ್ವತಿ, ಕೀಮ್ಯಾನ್ಗಳ ಬದುಕು. ಗಗನಯಾಗಿ ಬಣಕಾರ ಕೆಂಚಪ್ಪ, ಸದ್ಧರ್ಮ ಪೀಠದ ನ್ಯಾಯಾಲಯ, ಗುಳೆ ಹೊರಟವಳೆ ಗುಳೆ ಲಕ್ಕವ್ವ ಮುಂತಾದವು ಲೇಖಕನ ಸಂಶೋಧನ ದೃಷ್ಟಿಯನ್ನು ಪ್ರತಿನಿಧಿಸುತ್ತವೆ ಎಂದು ತಿಳಿಸಿದರು.
ಚಾನುಕೋಟಿ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಾನಾಮಡುಗು ದಾಸೋಹಮಠದ ಐಮುಡಿ ಶರಣಾರ್ಯರರು ಆಶೀರ್ವಚನ ನೀಡಿದರು. ವಿಶೇಷ ಆಹ್ವಾನಿತ ರಾದ ಎ. ರಾಜಣ್ಣ, ಕಲ್ಲುಕಂಬ ಪಂಪಾಪತಿ ಮಾತನಾಡಿದರು. ಕೃತಿಯ ಲೇಖಕ ಉಜ್ಜಿನಿ ರುದ್ರಪ್ಪ ಅನಿಸಿಕೆ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಕಾಸಲ ಸಾವಿತ್ರಮ್ಮ ಆಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ವಿಶೇಷ ಆಹ್ವಾನಿರಾದ ಎ. ಜಯಣ್ಣ, ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯ ರಿಜಿಸ್ಟ್ರಾರ್ ರೇವಯ್ಯ ಓಡೆಯರ್, ಪ.ಪಂ. ಉಪಾಧ್ಯಕ್ಷ ಎಚ್. ಗುರು ಬಸವರಾಜ್, ದೇವರಮನಿ ಶಿವಚರಣ, ವರ್ತಕ ರಾಂಪುರದ ಭರ್ಮಪ್ಪ, ಹರಾಳು ನಂಜಪ್ಪ, ಕೆ. ಲೋಕಪ್ಪ, ಹರಾಳು ಸಿದ್ದಪ್ಪ, ಮರಿಸ್ವಾಮಿ ಇದ್ದರು. ದೇವೆಂದ್ರಪ್ಪ ಸ್ವಾಗತಿಸಿದರು. ಚಿತ್ರಬಿಂಬ ದೇವರಾಜ್ ಬೆಂಗಳೂರು, ನಿರೂಪಿಸಿದರು. ಬೋರನಹಳ್ಳಿ ಮೂಗಪ್ಪ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.