ಕೂಡ್ಲಿಗಿ: ಪಟ್ಟಣದಲ್ಲಿ ಗುರುವಾರ ಗೌರಿ-ಗಣೇಶ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲಾಯಿತು.
ಪಟ್ಟಣದ ವಿವಿಧ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಲಾಗಿದ್ದು, ಕಳೆದ ವರ್ಷಕ್ಕಿಂತ ಈ ಬಾರಿ ಗಣೇಶನನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಷ್ಠಾಪಿಸ ಲಾಗಿದೆ.
ಗುರುವಾರ ಬೆಳಿಗ್ಗೆ ಪಟ್ಟಣದ ಪ್ರಮುಖ ಗಣೇಶನಾದ ನಾಗರಿಕ ಹಿತ ರಕ್ಷಣಾ ವೇದಿಕೆಯ ಸದಸ್ಯರು ವಿವಿಧ ವಾದ್ಯಗಳ ಮೆರವಣಿಗೆಯೊಂದಿಗೆ ಸಂಭ್ರಮದಿಂದ ಗಣೇಶನನ್ನು ಚಂದ್ರ ಶೇಖರ ಆಜಾದ್ ರಂಗಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿದರು.
ಪಟ್ಟಣದ ಶಾಲೆ, ಕಾಲೇಜುಗಳು, ಪ್ರಮುಖ ಬೀದಿಗಳಲ್ಲಿ, ವೃತ್ತಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಯಿತು. ಪುಟ್ಟ ಗಣೇಶನಿಂದ ಹಿಡಿದು 11 ಅಡಿ ಯವರೆಗೆ ವಿವಿಧ ಗಾತ್ರದ ಗಣೇಶನ ಮೂರ್ತಿಗಳು ಎಲ್ಲೆಡೆ ರಾರಾಜಿಸುತ್ತಿವೆ.
ಮಣ್ಣಿನ ಗಣೇಶನಿಗಿಂತ ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಗಣೇಶನ ಮೂರ್ತಿಗಳೇ ಹೆಚ್ಚು. ಮಧ್ಯಾಹ್ನ ಹಬ್ಬದಡುಗೆ ಮಾಡಿ ಗಣೇಶ ನಿಗೆ ಪೂಜೆ ಸಲ್ಲಿಸಿದ ಜನತೆ, ಸಂಜೆ ಪಟ್ಟಣದ ವಿವಿಧೆಡೆಯಿರುವ ಗಣೇಶನ ದರ್ಶನ ಪಡೆಯಲು ಸಡಗರದಿಂದ ತೆರಳಿದರು.
ಎಲ್ಲೆಡೆ ದೀಪಗಳ ಅಲಂಕಾರ ಮಾಡ ಲಾಗಿದ್ದು, ಹೆಂಗಳೆಯರು, ಮಕ್ಕಳು ತಂಡೋಪತಂಡವಾಗಿ ಗಣೇಶನ ದರ್ಶನ ವನ್ನು ಪಡೆಯುತ್ತಿದ್ದಾರೆ.
ಪ್ರತಿಷ್ಠಾಪಿಸಿರುವ ಗಣೇಶನನ್ನು ಕೆಲವೆಡೆ 3 ದಿನಗಳಿಗೆ ವಿಸರ್ಜಿಸಲಿದ್ದರೆ, ಕೆಲವೆಡೆ 5 ದಿನಗಳಿಗೆ ಗಣೇಶನನ್ನು ವಿಸರ್ಜಿಸಲಾಗುವುದು. ಉಡುಸಲಮ್ಮನ ಕಟ್ಟೆಯಲ್ಲಿ ನೀರಿಲ್ಲದ ಕಾರಣ ಗಣೇಶ ನನ್ನು ವಿಸರ್ಜಿಸಲು ಸಾರ್ವಜನಿಕರು ಬಾವಿಗಳ ಮೊರೆ ಹೋಗಬೇಕಿದೆ.
ಗುಡೇಕೋಟೆ: ತಾಲ್ಲೂಕಿನ ಗುಡೇಕೋಟೆ ಗ್ರಾಮದಲ್ಲಿ ಎಲ್ಲೆಡೆ ಸಂಘ-ಸಂಸ್ಥೆಗಳ ವತಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡಲಾಯಿತು. ಕನ್ನಡ ಕ್ರಾಂತಿದಳ ಯುವಕ ಸಂಘದ ವತಿಯಿಂದ 5ನೇ ವರ್ಷದ ಹಬ್ಬದ ಪ್ರಯುಕ್ತ ವಿದ್ಯಾರ್ಥಿ ಗಳಿಗಾಗಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ನಡೆಸಲಾಯಿತು.
ಸ್ಪರ್ಧೆಯಲ್ಲಿ ಗಜೇಂದ್ರ ಗ್ರೂಪ್ ಆಫ್ ಡ್ಯಾನ್ಸ್ ತಂಡ ಪ್ರಥಮ ಹಾಗೂ ಶುಭೋದಯ ವಿದ್ಯಾಸಂಸ್ಥೆಯ ಮಕ್ಕಳು ದ್ವಿತೀಯ ಬಹುಮಾನಗಳನ್ನು ಪಡೆದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಮಲ್ಲಿಕಾರ್ಜುನ್, ಎಸ್.ಜಿ. ತಿಪ್ಪೇ ಸ್ವಾಮಿ, ಶ್ರೀನಿವಾಸ್, ಪರಮೇಶ್ವರ, ಪಾಪಣ್ಣ, ಕೆ.ಲೋಕೇಶ, ಇಂದ್ರೇಶ್, ಹುಲುಗಪ್ಪ, ತಿಪ್ಪೇಶ, ತಿಪ್ಪೇಸ್ವಾಮಿ, ನಾಗಯ್ಯ, ಶಿಕ್ಷಕರಾದ ಶಾಂತಕುಮಾರ, ನಾಗರಾಜ, ಗಜೇಂದ್ರ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.