ದೇವನಹಳ್ಳಿ: ‘ಕಾಂಗ್ರೆಸ್ ಸರ್ಕಾರದ ಆಡಳಿತಾವಧಿ 2017–18 ನೇ ಸಾಲಿನಲ್ಲಿ ಬೈಯಾಪ ವತಿಯಿಂದ ಬಿಡುಗಡೆಯಾದ ₹8 ಕೋಟಿ ವೆಚ್ಚದಲ್ಲಿ ಕುಂದಾಣ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಮೂಲ ಸೌಲಭ್ಯಕ್ಕೆ ಒತ್ತು ನೀಡಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಮಂಜುನಾಥ್ ತಿಳಿಸಿದರು.
‘ಆರದೇಶನಹಳ್ಳಿ ಗ್ರಾಮದಲ್ಲಿ ಚರಂಡಿ ಮತ್ತು ಸಿಮೆಂಟ್ ರಸ್ತೆ ಕಾಮಗಾರಿ ಪರಿಶೀಲಿಸಿ ಮಾತನಾಡಿದ ಅವರು, ’ಅಣ್ಣೇಶ್ವರ, ಕನ್ನಮಂಗಲ, ಜಾಲಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯಿತಿ ಸಂಪನ್ಮೂಲ ಕ್ರೋಡೀಕರಣ ಸ್ಪಲ್ಪ ಉತ್ತಮವಾಗಿದೆ. ಅಲೂರುದುದ್ದನಹಳ್ಳಿ, ಕುಂದಾಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆ ಕಂದಾಯ ಹೊರತು ಪಡಿಸಿದರೆ ಇತರೆ ಮೂಲಗಳಿಂದ ಅನುದಾನ ಬರುವುದಿಲ್ಲ. ನರೇಗಾ ಯೋಜನೆಯಿಂದ ಪ್ರತಿಯೊಂದು ಕೆಲಸ ಮಾಡಿಸಲು ಸಾಧ್ಯವಿಲ್ಲ‘ ಎಂದರು.
’2018ರಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ನೀತಿ ಸಂಹಿತೆ ಭೀತಿಯಿಂದ ಅನುದಾನ ಬಿಡುಗಡೆಯಾಗಿದ್ದರೂ ಅನೇಕ ಕಡೆ ಕಾಮಗಾರಿ ಆರಂಭಿಸಿರಲಿಲ್ಲ. ಓವರ್ ಹೆಡ್ ಟ್ಯಾಂಕ್ ನಿರ್ಮಾಣ, ಸಿಮೆಂಟ್ ಮತ್ತು ರಸ್ತೆ ಡಾಂಬರೀಕರಣ, ನೆಲದಲ್ಲಿ ಕುಡಿಯುವ ನೀರಿನ ಶೇಖರಣಾ ಸಿಮೆಂಟ್ ತೊಟ್ಟಿ, ಸರ್ಕಾರಿ ಶಾಲೆಗಳ ದುರಸ್ತಿ ಮತ್ತು ನೂತನ ಹೆಚ್ಚುವರಿ ಕೊಠಡಿಗಳ ನಿರ್ಮಾಣ, ನೂತನ ಅಂಗನವಾಡಿ ಕಟ್ಟಡ ನಿರ್ಮಾಣ, ಸರ್ಕಾರಿ ಶಾಲಾ ಕಾಂಪೌಂಡ್ ನಿರ್ಮಾಣ, ಕುಡಿಯುವ ನೀರಿನ ಪೈಪ್ ಕಾಮಗಾರಿ ಒಟ್ಟು 67 ಕಾಮಗಾರಿ ಬೈಯಾಪ ಅನುದಾದಲ್ಲಿ ನಡೆಸಲಾಗುತ್ತಿದೆ. ಶೇ 90ರಷ್ಟು ಮುಗಿದಿದೆ‘ ಎಂದರು.
‘ಕುಂದಾಣ ಹೋಬಳಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ಉತ್ತಮ ಗುಣ ಮಟ್ಟದ ರಸ್ತೆ ಇದ್ದರೂ ಅದಕ್ಕೆ ಸಿಮೆಂಟ್ ಹಾಕಲು ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ದೂರಿದ್ದಾರೆ. ಯಾವ ಅನುದಾನ ಮತ್ತು ಮತ್ತು ಟೆಂಡರ್ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದಿಂದ ಜಿಲ್ಲಾ ಪಂಚಾಯಿತಿ ಅನುದಾನ ಯಥಾ ಪ್ರಕಾರ ಬಿಡುಗಡೆಯಾಗುತ್ತಿದೆ ತೊಂದರೆ ಇಲ್ಲ. ಬೇರೆ ಅನುದಾನದ ಬಗ್ಗೆ ಗೊತ್ತಿಲ್ಲ’ ಎಂದರು