ಆನೇಕಲ್ : ಬನ್ನೇರುಘಟ್ಟದ ಮನೆಯೊಂದರಲ್ಲಿ ಶುಕ್ರವಾರ ಸಿಲಿಂಡರ್ನಿಂದ ಅನಿಲ ಸೋರಿಕೆಯಿಂದಾಗಿ ಸ್ಫೋಟ ಉಂಟಾಗಿ ಇಬ್ಬರು ಗಾಯಗೊಂಡಿದ್ದು, ಮನೆ ಕಿಟಕಿ ಬಾಗಿಲುಗಳು ಜಖಂಗೊಂಡಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಮೈಸೂರು ಮೂಲದ ರಾಜೇಂದ್ರ ತಮ್ಮ ಮಗಳು ಮತ್ತು ಅಳಿಯನೊಂದಿಗೆ ಬನ್ನೇರುಘಟ್ಟದ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಬೆಳಗ್ಗೆ ಸ್ಟೌ ಹೊತ್ತಿಸಿದಾಗ ಸ್ಫೋಟ ಸಂಭವಿಸಿದೆ.
ರಾಜೇಂದ್ರ ಮತ್ತು ಮಗಳು ರೂಪಾಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೋಟದ ರಭಸಕ್ಕೆ ಮನೆಯ ಕಿಟಕಿ ಬಾಗಿಲುಗಳು ಪುಡಿಪುಡಿಯಾಗಿವೆ. ಮೇಲ್ಛಾವಣಿಯ ಸಿಮೆಂಟ್ ಶೀಟ್ ಧ್ವಂಸವಾಗಿವೆ. ಗಾಯಗೊಂಡ ರಾಜೇಂದ್ರ ಮತ್ತು ರೂಪಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು.