ಹೊಸಕೋಟೆ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಪ್ರಯೋಜನ ದೊರೆಯುವಂತಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಟಿ.ಬಿ. ನಾಗರಾಜ್ ಹೇಳಿದರು.
ತಾಲ್ಲೂಕಿನ ಹೆತ್ತಕ್ಕಿ ಗ್ರಾಮ ಪಂಚಾಯಿತಿಯ ಸುಮಾರು 10 ಹಳ್ಳಿಗಳ ಗ್ರಾಮಸ್ಥರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸಿಅವರು ಮಾತನಾಡಿದರು.
‘ಗ್ರಾಮಾಂತರ ಭಾಗದ ಜನರು ಕಾರ್ಡ್ ಮಾಡಿಸಿಕೊಳ್ಳುವ ಸಲುವಾಗಿ ದಿನಗಟ್ಟಲೇ ಸಾಲಿನಲ್ಲಿ ನಿಂತು ಸಮಯವನ್ನು ಹಾಳು ಮಾಡಬೇಕಿತ್ತು. ಅದಕ್ಕಾಗಿ ಈಗ ಗ್ರಾಮಸ್ಥರ ಮನೆಬಾಗಿಲಿಗೆ ಬಂದು ಅವರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ಗಳನ್ನು ವಿತರಿಸುತ್ತಿರುವುದಾಗಿ’ ತಿಳಿಸಿದರು.
‘ಜನರಿಗೆ ಆರೋಗ್ಯದ ಸಮಸ್ಯೆಯಾದಾಗ ಸರ್ಕಾರಿ ಆಸ್ಪತ್ರೆಯ ಸೂಚನೆ ಮೇರೆಗೆ ಯಾವುದೇ ಆಸ್ಪತ್ರೆಯಲ್ಲಿ ₹ 5 ಲಕ್ಷವರೆಗಿನ ಚಿಕಿತ್ಸೆ ಮಾಡಿಸಿಕೊಳ್ಳಬಹುದಾಗಿದೆ’ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಂದಗುಡಿ ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಸಂದ್ರ ನಾಗರಾಜ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಜಯರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಜಯದೇವಯ್ಯ, ಮುಖಂಡರಾದ ಲಿಂಗಾಪುರ ಮಂಜುನಾಥ್ ಭಾಗವಹಿಸಿದ್ದರು.