ಚನ್ನಪಟ್ಟಣ: ಬೀಡಿ ಕಾರ್ಮಿಕರ ವಸತಿಗೃಹ ನಿರ್ಮಾಣಕ್ಕಾಗಿ ತಾಲ್ಲೂಕಿನ ಹೊನ್ನಗಾನಹಳ್ಳಿ ಗ್ರಾಮದ ಸರ್ವೆ ನಂ.211, 212, 213ಕ್ಕೆ ಸೇರಿದ ಸುಮಾರು 2.5 ಎಕರೆ ಜಮೀನನ್ನು ಕ್ರಮಬದ್ಧವಾಗಿ ಖಾತೆ ಮಾಡಿಕೊಳ್ಳಲಾಗಿದೆ ಎಂದು ಚನ್ನಪಟ್ಟಣ ಟೌನ್ ಬೀಡಿ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಉಪಾಧ್ಯಕ್ಷ ಮಹಮ್ಮದ್ ಆಲಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ನಿರ್ಮಾಣ ಸಮಿತಿ ಅಧ್ಯಕ್ಷ ಎಸ್.ಕೆ.ಸೈಯ್ಯದ್ ಸಫಿ ಉಲ್ಲಾ ಸಕಾಫ್ ಅವರ ಹೆಸರಿಗೆ ಈ ಜಮೀನನ್ನು ಖಾತೆ ಮಾಡಲಾಗಿದೆ. ಆದರೆ ಈ ಬಗ್ಗೆ ಕೆಲವರು ಅಕ್ರಮ ಖಾತೆ ಮಾಡಿಕೊಳ್ಳಲಾಗಿದೆ ಎಂದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
‘ಜಮೀನಿಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ಪ್ರದರ್ಶಿಸಿದ ಅವರು, ಸಂಘದ ಸದಸ್ಯರಿಗೆ ಅಂದರೆ ಬೀಡಿ ಕಾರ್ಮಿಕರಿಗೆ ವಸತಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ಸದುದ್ದೇಶದಿಂದ ಈ ಜಮೀನನ್ನು ಸಯದಾ ಫರೀದ್ ಎಂಬುವವರಿಂದ ಖರೀದಿಸಿದ್ದೇವೆ’ ಎಂದು ತಿಳಿಸಿದರು.
‘ಆದರೆ ಈ ಜಮೀನಿಗೆ ಯಾವುದೇ ಸಂಬಂಧವಿಲ್ಲದ ಮಂಗಳವಾರಪೇಟೆ ನಿವಾಸಿ ಚಿಕ್ಕಣ್ಣ ಬಿನ್ ಎಲಗಯ್ಯ ಹಾಗೂ ಕುಟುಂಬದವರು ಹಣ ಪಡೆಯುವ ದುರುದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿ ಸದರಿ 2.5 ಎಕರೆ ಜಮೀನನ್ನು ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಸತ್ಯಾಂಶವಿಲ್ಲ’ ಎಂದರು.
‘ಜಮೀನಿನ ದಾಖಲೆಗಳು ಕ್ರಮಬದ್ಧವಾಗಿವೆ. ನ್ಯಾಯಾಲಯಗಳಲ್ಲಿಯೂ ನಮ್ಮ ಪರವಾಗಿಯೇ ತೀರ್ಪು ಬಂದಿದೆ’ ಎಂದು ಅವರು ತಿಳಿಸಿದರು.
ಸಂಘದ ನಿರ್ದೇಶಕರಾದ ಅಸ್ಮತ್ ಪಾಷಾ ನಿಜಾಮಿ, ಶಬೀರ್ ಉಲ್ಲಾ ಬೇಗ್, ಸೈಯದ್ ರೆಹಮಾನ್, ಭದ್ರುನ್ನಿಸಾ, ಅಜೀಜ್ ಉಲ್ಲಾ ಇದ್ದರು.