ದೇವನಹಳ್ಳಿ: ಅಕ್ರಮವಾಗಿ ಬೈಕ್ ಜಪ್ತಿ ಮಾಡಿ ಮಾಲೀಕರಿಗೆ ಮರಳಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಟ್ಟಣ ಠಾಣೆಯ ಎಎಸ್ಐ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಅಮಾನತು ಗೊಂಡವರು.
ಪಟ್ಟಣದ ವ್ಯಕ್ತಿಯೊಬ್ಬರ ಕೌಟುಂಬಿಕ ಕಲಹ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಈ ವೇಳೆ ಅಕ್ರಮವಾಗಿ ವ್ಯಕ್ತಿಯ ಬೈಕ್ ಅನ್ನು ಎಎಸ್ಐ ಜಪ್ತಿ ಮಾಡಿದ್ದರು. ಇದನ್ನು ಮರಳಿ ಕೊಡಲು ₹ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ಸಂಬಂಧ ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದ್ದ ಸಂತ್ರಸ್ತ ವ್ಯಕ್ತಿಯು ಕಾನೂನುಬಾಹಿರವಾಗಿ ಬೈಕ್ ಜಪ್ತಿ ಮಾಡಿರುವ ಬಗ್ಗೆ ಅಳಲು ತೋಡಿಕೊಂಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಅನೂಪ್ ಶೆಟ್ಟಿ ತನಿಖೆಗೆ ಸೂಚಿಸಿದ್ದರು.
ಆಂತರಿಕ ವಿಚಾರಣೆ ನಡೆಸಿದ ಬಳಿಕ ಎಎಸ್ಐ ಲಂಚಕ್ಕೆ ಬೇಡಿಕೆ ಇಟ್ಟಿದ್ದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ.