ವಿಜಯಪುರ: ಇಲ್ಲಿನ ವಿವೇಕ ಮಂದಿರದಲ್ಲಿ ಬಾಲಗೋಕುಲದ 60 ಕ್ಕೂ ಹೆಚ್ಚು ಮಂದಿ ಮಕ್ಕಳು ’ನನ್ನ ಗಣಪ ಮಣ್ಣಿನ ಗಣಪ’ ಕಾರ್ಯಕ್ರಮದಡಿಯಲ್ಲಿ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದ್ದರು.
ಜೇಡಿ ಮಣ್ಣಿನ ಉಂಡೆಗಳನ್ನು ಕೈಗಳಲ್ಲಿ ಹಿಡಿದು ಕಲ್ಪನೆಗೆ ಅನುಗುಣವಾಗಿ ಗಣಪತಿ ಮೂರ್ತಿಗಳ ಆಕಾರವನ್ನು ತಯಾರಿಸುತ್ತಾ ಸಂಭ್ರಮಿಸಿದರು.
ವಿವೇಕ ಮಂದಿರದ ಮುಖ್ಯಸ್ಥ ಎಸ್.ಲಕ್ಷ್ಮಣ್ ಮಾತನಾಡಿ, ‘ರಾಸಾಯನಿಕ ಬಣ್ಣಗಳನ್ನು ಲೇಪಿಸಿರುವ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ವಿಸರ್ಜನೆ ಮಾಡುವುದರಿಂದ ನೀರು ಕಲುಷಿತಗೊಳ್ಳುತ್ತದೆ. ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುತ್ತಿರುವುದರ ಫಲವಾಗಿ ಮಕ್ಕಳು ತಾವೇ ಜೇಡಿ ಮಣ್ಣು ತಂದು ಗಣಪತಿ ಮೂರ್ತಿಗಳನ್ನು ತಯಾರು ಮಾಡಿ ಪೂಜಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ’ ಎಂದರು.
‘ಇದರಿಂದ ಮಕ್ಕಳಲ್ಲಿ ಉತ್ತಮ ಜಾಗೃತಿ ಮೂಡುವುದರ ಜೊತೆಗೆ ಮನೆಯಲ್ಲಿ ಸಿಗುವ ಸುಣ್ಣ, ಕುಂಕುಮ, ಅರಿಶಿನ ಬಳಸಿ, ಮಣ್ಣಿನ ಗಣಪನಿಗೆ ಅಲಂಕರಿಸಬಹುದು. ಸೌಂದರ್ಯ ಎನ್ನುವುದು ನೋಡುವವರ ಮನಸ್ಸಿನಲ್ಲಿದೆ. ಇಷ್ಟು ಮುತುವರ್ಜಿ ವಹಿಸಿದರೆ, ಜಲಮೂಲಗಳು ಮಲಿನವಾಗುವುದು, ಜಲಚರಗಳು ಸಾಯವುದನ್ನು ತಪ್ಪಿಸಬಹುದು’ ಎಂದರು.
ಶಿಬಿರದ ಮುಖ್ಯಸ್ಥೆ ವಿ.ರಮ್ಯ, ರವಿಕುಮಾರ್, ಅನಿಲ್ ಸೇರಿದಂತೆ ಮಕ್ಕಳ ಪೋಷಕರು ಇದ್ದರು.