ದೇವನಹಳ್ಳಿ: ಪ್ರಸ್ತುತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುವುದು ಭವಿಷ್ಯದ ಜೀವನ ಮಾರ್ಗಕ್ಕೆ ದಿಕ್ಸೂಚಿಯಾಗಲಿದೆ ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.
ಇಲ್ಲಿನ ಶಿಲ್ಪಕಲಾ ಶಾಲಾ ಆವರಣದಲ್ಲಿ ವಾಗ್ದೇವಿ ಕೋಚಿಂಗ್ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇವನಹಳ್ಳಿ ಜಿಲ್ಲಾ ಕೇಂದ್ರವಾಗಿ ಗುರುತಿಸಿಕೊಂಡಿದ್ದರು ಈವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಕೇಂದ್ರಗಳಿರಲಿಲ್ಲ, ಇದೊಂದು ಉತ್ತಮ ಕೆಲಸ ಸಂಘಟಕರು ಮಾಡಿದ್ದಾರೆ, ದಶಕಗಳ ಹಿಂದೆ ಯಾವುದೇ ಒಂದು ಇಲಾಖೆಯಲ್ಲಿ ಉದ್ಯೋಗ ಪಡೆದುಕೊಳ್ಳಬೇಕಾದರೆ ಶ್ರೇಣಿಕೃತ ಅಂಕಗಳು ಮತ್ತು ಸಂದರ್ಶನದ ಮೂಲಕ ಆಯ್ಕೆಮಾಡಿಕೊಳ್ಳುತ್ತಿದ್ದರು, ಶಿಫಾರಸು, ಹುದ್ದೆಗೆ ಇಂತಿಷ್ಟು ಹಣ ನೀಡಿ ಉದ್ಯೋಗ ಪಡೆದುಕೊಳ್ಳುವ ವ್ಯವಸ್ಥೆಯಿಂದ ಅರ್ಹರು ಉದ್ಯೋಗ ವಂಚಿತರಾಗುತ್ತಿದ್ದರು ಎಂದರು.
ಪ್ರಸ್ತುತ ವ್ಯವಸ್ಥೆ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾದರೆ ಮಾತ್ರ ಉದ್ಯೋಗ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚುತ್ತಲೇ ಇದೆ, ಪ್ರತಿಯೊಬ್ಬರಿಗೂ ಉದ್ಯೋಗ ದೊರಕಿಸಿಕೊಳ್ಳಲು ಸಾಧ್ಯವಿಲ್ಲ, ಅನೇಕ ಖಾಸಗಿ ಕಂಪನಿಗಳಲ್ಲಿಯೂ ಉದ್ಯೋಗ ಪಡೆದುಕೊಳ್ಳಬಹುದು, ಕರ್ನಾಟಕ ಲೋಕಸೇವಾ ಆಯೋಗ, ಪೊಲೀಸ್, ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ರೈಲ್ವೆ ಮತ್ತು ಬ್ಯಾಂಕಿಂಗ್ ಇಲಾಖೆಗಳಲ್ಲಿ ಅತಿಹೆಚ್ಚು ಉದ್ಯೋಗಾವಕಾಶಗಳಿವೆ, ಸ್ಪರ್ಧಿಗಳಿಗೆ ಇಚ್ಛಾಶಕ್ತಿ ಬೇಕು ಎಂದು ಹೇಳಿದರು.
ಹಾಪ್ಕಾಮ್ಸ್ ಉಪಾಧ್ಯಕ್ಷ ಬಿ.ಮುನೇಗೌಡ ಮತ್ತು ತಹಶೀಲ್ದಾರ್ ಅಜಿತ್ ಕುಮಾರ್ ರೈ ಮಾತನಾಡಿ, ‘ತರಬೇತಿಯೊಂದೆ ಮಾನದಂಡವಲ್ಲ, ಪರಿಕ್ಷಾರ್ಥಿಗಳು ಕಠಿಣ ಪರಿಶ್ರಮ ಪಡಬೇಕು, ಯೋಧರಾಗಿ ದೇಶಸೇವೆ ಮಾಡಲು ಉತ್ತಮ ಅವಕಾಶಗಳಿವೆ, ಸಂಕಷ್ಟಗಳನ್ನು ಮೀರಿ ಹೊರಬರಬೇಕು’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ. ಮಂಜುನಾಥ್ ಮಾತನಾಡಿ, ತಾಲ್ಲೂಕಿನ ಬಹುತೇಕ ವಿದ್ಯಾವಂತರು ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಾಗಿ ಚಿಕ್ಕಬಳ್ಳಾಪುರ, ಯಲಹಂಕ, ಬೆಂಗಳೂರು ನಗರದ ವಿವಿಧೆಡೆಗೆ ತೆರಳಬೇಕಿತ್ತು, ಪ್ರಸ್ತುತ ಇಲ್ಲೇ ಆರಂಭವಾಗಿರುವುದರಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ, ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ತರಬೇತುದಾರ ಮಂಜುನಾಥ್ ಬ್ಯಾಡಗಿ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯಿತ್ರಿದೇವಿ ಮಾತನಾಡಿದರು.
ತರಬೇತಿ ಕೇಂದ್ರ ಕಾರ್ಯದರ್ಶಿ ಮಧುಸೂಧನ್, ಮೇಲ್ವಿಚಾರಕ ಸಂತೋಷ್ ಕುಮಾರ್, ಎ.ಪಿ.ಎಂ.ಸಿ ಅಧ್ಯಕ್ಷ ಕೆ.ವಿ. ಮಂಜುನಾಥ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜಯಕರ್ನಾಟಕ ಸಂಘಟನೆ ರಾಜ್ಯ ಘಟಕ ಸಂಘಟನಾ ಕಾರ್ಯದರ್ಶಿ ಟಿ.ರವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.