ಆನೇಕಲ್: ಸಂಘ ಸಂಸ್ಥೆಗಳು ಪ್ರಗತಿ ಕಾಣಬೇಕಾದರೆ ಮಾಹಿತಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಮತ್ತು ಆಡಳಿತ ವ್ಯವಹಾರಗಳು ಸಂಪೂರ್ಣ ಪಾರದರ್ಶಕವಾಗಿರಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಎಂ.ಶ್ರೀನಿವಾಸ್ ತಿಳಿಸಿದರು.
ಅವರು ಪಟ್ಟಣದ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಸಂಘದ ಕಾರ್ಯಚಟುವಟಿಕೆಗಳ ಗಣಕೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು.
‘ಆನೇಕಲ್ ಕೆಎಸ್ಆರ್ಟಿಸಿ ಪತ್ತಿನ ಸಹಕಾರ ಸಂಘವು 1978ರಲ್ಲಿ ಆರಂಭವಾಗಿ ನೌಕರ ಸ್ನೇಹಿಯಾಗಿ ಕೆಲಸ ಮಾಡುತ್ತಿದೆ. ಪ್ರತಿ ಸದಸ್ಯರಿಗೂ ತಲಾ ₹ 50 ಸಾವಿರ ಸಾಲ ಸೌಲಭ್ಯ ನೀಡುತ್ತಿದೆ. ಸಂಘದ ಚಟುವಟಿಕೆಗಳನ್ನು ಗಣಕೀರಣ ಮಾಡಲು ಹಲವು ವರ್ಷಗಳಿಂದ ಚಿಂತನೆ ಮಾಡಲಾಗಿತ್ತು. ಗಣಕೀರಣದಿಂದಾಗಿ ಸದಸ್ಯರಿಗೆ ಎಲ್ಲಾ ಮಾಹಿತಿಗಳು ತ್ವರಿತವಾಗಿ ದೊರೆಯುವಂತಾಗಿದೆ’ ಎಂದರು.
‘ಸಂಘದ ವತಿಯಿಂದ ನೌಕರರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತಿದೆ. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉನ್ನತ ಅಂಕ ಗಳಿಸಿದ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಸಂಘವು ಲಾಭದಾಯಕವಾಗಿ ನಡೆಯುತ್ತಿದ್ದು ಮುಂಬರುವ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಚಿಂತನೆ ಮಾಡಲಾಗಿದೆ’ ಎಂದರು.
ಸಂಘದ ನಿರ್ದೇಶಕರಾದ ಸುಲೋಚನಾ ದೇವಿ, ಇಬ್ರಾಹಿಂ, ಉದಯ್, ಉಮೇಶ್, ಗಿರೀಶ್ ಹಾಜರಿದ್ದರು.