ಹೊಸಕೋಟೆ: ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚಿಸಿದ್ದ ಆರೋಪಿಗೆ ಪಟ್ಟಣದ ಜೆಎಂಎಫ್ ನ್ಯಾಯಾಲಯ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ತಾಲ್ಲೂಕಿನ ನಂದಗುಡಿ ಹೋಬಳಿಯ ಬೀರನಹಳ್ಳಿಯ ಮುನಿರಾಜ್ ಶಿಕ್ಷೆಗೊಳಗಾದವರು.
ಆತ ಅದೇ ಗ್ರಾಮದ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಮನೆಗೆ ಕರೆದುಕೊಂಡು ಹೋಗಿ ಆಕೆಯ ಜೊತೆಯಲ್ಲಿ ವಾಸಿಸುತ್ತಿದ್ದ. ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಆತ, ಆಕೆ ಹಾಗೂ ಹೆಣ್ಣುಮಗುವನ್ನು ಮನೆಯಿಂದ ಹೊರಹಾಕಿ ಬೇರೊಂದು ಮದುವೆಯಾಗಿದ್ದ.
ಈ ಸಂಬಂಧ ಮುನಿರಾಜು ವಿರುದ್ಧ 2008ರಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಆರ್.ಬಿ. ಗಿರೀಶ್ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಮುನಿರಾಜ್ಗೆ ಐಪಿಸಿ ಕಲಂ 417ರ ಅಪರಾಧಕ್ಕಾಗಿ 6 ತಿಂಗಳ ಜೈಲು ಸಜೆ ಹಾಗೂ ₹ 5 ಸಾವಿರ ದಂಡ, ಐಪಿಸಿ ಕಲಂ 420ರ ಅಪರಾಧಕ್ಕಾಗಿ ಎರಡು ವರ್ಷ ಜೈಲು ಶಿಕ್ಷೆ ಹಾಗೂ ₹ 5 ಸಾವಿರ ದಂಡ ವಿಧಿಸಿದ್ದಾರೆ.