ದೇವನಹಳ್ಳಿ: 18 ವರ್ಷ ಮೇಲ್ಪಟ್ಟ ವಯಸ್ಸಿನ ವಿದ್ಯಾರ್ಥಿಗಳು ಮತದಾರರ ಪಟ್ಟಿಯಲ್ಲಿ ನೊಂದಣಿ ಮಾಡಿಸಿಕೊಳ್ಳಲು ಹಾಗೂ ಪ್ರತಿಯೊಬ್ಬರು ಕನಿಷ್ಠ ಐದು ಯುವ ಮತದಾರರಿಗೆ ಗುರುತಿನ ಚೀಟಿ ಮಾಡಿಸಲು ಅರಿವು ಮೂಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್ ಎಚ್. ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಮತದಾರರ ಪಟ್ಟಿ 2024ರ ವಿಶೇಷ ಪರಿಷ್ಕರಣೆ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮತದಾರರು ಮತದಾರರ ಪಟ್ಟಿಯ ಪರಿಷ್ಕರಣೆಯ ಅನುಕೂಲ ಪಡೆಯಬೇಕು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ಯುವ ಮತದಾರರು ತಮ್ಮ ತಮ್ಮ ಸ್ನೇಹಿತರಿಗೂ, ವಿದ್ಯಾರ್ಥಿಗಳಿಗೂ ಮತದಾರರ ಪಟ್ಟಿಗೆ ಸೇರಿಸುವ ವಿಷಯವನ್ನು ತಿಳಿಸಬೇಕು ಎಂದು ಸಲಹೆ ನೀಡಿದರು.
ತಮ್ಮ ಹಕ್ಕನ್ನು ಚಲಾಯಿಸಿದರೆ ಮಾತ್ರ ಈ ದೇಶದ ಅಭಿವೃದ್ಧಿಗೆ ನಿಮ್ಮ ಕೊಡುಗೆ ನೀಡಿದಂತಾಗುತ್ತದೆ. ಹೊಸ ಮತದಾರರ ನೋಂದಣೆಗಾಗಿ ನಮೂನೆ-6, ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ನಮೂನೆ-7, ಮತದಾರರ ಗುರುತಿನ ಚೀಟಿಗೆ ಆಧಾರ್ ಜೋಡಣೆಗೆ ನಮೂನೆ-6(ಬಿ) ಮತ್ತು ವಾಸಸ್ಥಳ ಬದಲಾವಣೆ ಒಳಗೊಂಡ ಇತರೆ ತಿದ್ದುಪಡಿಗಾಗಿ ನಮೂನೆ-8 ಅರ್ಜಿಗಳನ್ನು ಬಿ.ಎಲ್.ಓ ಗಳಿಗೆ ನೀಡುವ ಅಥವಾ ವಿ.ಎಚ್.ಎಫ್ ಮುಖಾಂತರ ಸಲ್ಲಿಸುವ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶಿವರಾಜ್, ಇಒ ಶ್ರೀನಾಥ್ ಗೌಡ, ಪ್ರಾಂಶುಪಾಲ ಮಂಜಯ್ಯ, ಪುರಸಭೆ ಮುಖ್ಯಾಧಿಕಾರಿ ದೊಡ್ಡಮಲವಯ್ಯ, ರಾಜಸ್ವ ನಿರೀಕ್ಷಕ ಮಹೇಶ್, ಗ್ರಾಮ ಲೆಕ್ಕಿಗ ಸಂತೋಷ್, ಕಾಲೇಜು ಸಿಬ್ಬಂದಿ. ಪುರಸಭೆ ಕಂದಾಯಾಧಿಕಾರಿ ಮಂಜುನಾಥ್ ಹಾಗೂ ಅಂಗನವಾಡಿ ಕಾರ್ಯಕರ್ತರು ಉಪಸ್ಥಿತರಿದ್ದರು.