ನೆಲಮಂಗಲ: ತಾಲ್ಲೂಕಿನಲ್ಲಿ ₹ 869 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಮಾರ್ಚ್ 4ರಂದು ಹಮ್ಮಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಕೆ.ಜೆ. ಜಾರ್ಜ್, ವಿವಿಧ ಸಚಿವರು ಭಾಗವಹಿಸಲಿದ್ದಾರೆ ಎಂದು ಶಾಸಕ ಎನ್. ಶ್ರೀನಿವಾಸ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
₹ 27.60 ಕೋಟಿ ವೆಚ್ಚದಲ್ಲಿ 220 ಕೆ.ವಿ. ಸಾಮರ್ಥ್ಯದ ವಿದ್ಯುತ್ ವಿತರಣಾ ಉಪಕೇಂದ್ರ, 2,500 ಮನೆಗಳ ಸಾಂಕೇತಿಕ ವಿತರಣೆ, 69 ಕೆರೆಗಳನ್ನು ತುಂಬಿಸುವ ವೃಷಭಾವತಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.
ತಾಲ್ಲೂಕಿಗೆ ಒಂದು ರೂಪಾಯಿಯೂ ಬಿಡುಗಡೆಯಾಗಿಲ್ಲ ಎಂದು ಮಾಜಿ ಶಾಸಕ ಕೆ.ಶ್ರೀನಿವಾಸಮೂರ್ತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಷ್ಟೆಲ್ಲ ಅನುದಾನ ಬಿಡುಗಡೆಯಾಗಿರುವುದು ಸುಳ್ಳೇ ಎಂದು ಪ್ರಶ್ನಿಸಿದರು.
ಮಾಹಿತಿ ಹಕ್ಕಿನ ಮೂಲಕವೂ ಮಾಜಿ ಶಾಸಕರು ಮಾಹಿತಿ ಪಡೆಯಬಹುದು. ನನ್ನ ಅವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಪಟ್ಟಿ ಕೊಡಿ ಎಂದು ಬಿಜೆಪಿ ಪರಾಜಿತ ಅಭ್ಯರ್ಥಿ ಸಪ್ತಗಿರಿ ಶಂಕರ್ನಾಯಕ್ ಹಾಗೂ ಮುಖಂಡರು ಕೇಳಿದ್ದರು. ಇದಕ್ಕೆ ಉತ್ತರವಾಗಿ ಮುಖ್ಯಮಂತ್ರಿಯವರೇ ಬಂದು ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂದು ಉತ್ತರ ನೀಡಿದರು.