ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಪಕ್ಷೀಯರ ಷಡ್ಯಂತ್ರವೇ ಸೋಲಿಗೆ ಕಾರಣ’

ಜಿಲ್ಲೆಯ ವಿವಿಧ ಕ್ಷೇತ್ರಗಲ್ಲಿ ಸೋತ ಪ್ರಮುಖರ ಆರೋಪ
Last Updated 17 ಮೇ 2018, 8:07 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಹಾಗೂ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.

ಸಚಿವೆ ಉಮಾಶ್ರೀ, ಹಾಲಿ ಶಾಸಕರಾಗಿದ್ದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ಬಿಜೆಪಿಯ ಶ್ರೀಕಾಂತ ಕುಲಕರ್ಣಿ, ಕಾಂಗ್ರೆಸ್‌ನಿಂದ ಮೊದಲ ಬಾರಿ ಮುಧೋಳದಲ್ಲಿ ಟಿಕೆಟ್ ಪಡೆದಿದ್ದ ಸತೀಶ ಬಂಡಿವಡ್ಡರ ಸೋತವರಲ್ಲಿ ಪ್ರಮುಖರು. ತಮ್ಮ ಸೋಲಿಗೆ ಕಾರಣವಾದ ಸಂಗತಿಗಳು ಎಲ್ಲರೂ ಕೆಳಗಿನಂತೆ ವಿಶ್ಲೇಷಿಸಿದ್ದಾರೆ.

‘ಚುನಾವಣೆಯಲ್ಲಿ ಸೋತೆ ಎಂಬ ಕಾರಣಕ್ಕೆ ಊರು ಬಿಟ್ಟು ಓಡಿ ಹೋಗಿಲ್ಲ. ರಬಕವಿ–ಬನಹಟ್ಟಿಯ ಮನೆಯಲ್ಲೇ ಇದ್ದೇನೆ. ವಿರೋಧಿಗಳ ಅಪಪ್ರಚಾರಕ್ಕೆ ಈ ಪುಟ್ಮಲ್ಲಿ ಜಗ್ಗುವುದಿಲ್ಲ’ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು.

‘ಚುನಾವಣೆ ಓಡಾಟದ ಕಾರಣ ಒಂದಷ್ಟು ಬಳಲಿದ್ದು, ಹಾಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದೇನೆ. ನನ್ನ ನಂಬಿರುವ ಕಾರ್ಯಕರ್ತರು, ಮುಖಂಡರನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಅವರ ಬೆನ್ನಿಗೆ ನಿಲ್ಲುವೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಕ್ಷೇತ್ರದಲ್ಲಿ ಎದುರಾಳಿಯ ಗೆಲುವು ಸ್ವಂತ ಶಕ್ತಿಯಿಂದ ಬಂದದ್ದಲ್ಲ. ಬದಲಿಗೆ ಆರ್ಎಸ್‌ಎಸ್‌ನ ತಂತ್ರಗಾರಿಕೆ, ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ಅವರ ಕಾರಣಕ್ಕೆ ಗೆಲುವು ಸಿಕ್ಕಿದೆ. ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿಯೇ ದುಡಿದಿದ್ದಾರೆ. ಹಗಲು–ರಾತ್ರಿ ಶ್ರಮಪಟ್ಟಿದ್ದಾರೆ’ ಎಂದರು.

ಅಪಪ್ರಚಾರ ಮಾಡಿದರು: ‘ನೇಕಾರರ ಸಾಲ ಮನ್ನಾ ಆಗಿದೆ. ಚುನಾವಣೆ ನೀತಿ–ಸಂಹಿತೆಯ ಕಾರಣ ಅದರ ಅನುಷ್ಠಾನ ತಡವಾಗಿದೆ. ನಾನು ಏನೂ ಕೆಲಸ ಮಾಡಲಿಲ್ಲ ಎಂದು ಅಪಪ್ರಚಾರ ಮಾಡಿದವರು ಕ್ಷೇತ್ರಕ್ಕೆ ಬಂದು ನೋಡಲಿಲ್ಲ.

ದೇವರ ಮೇಲಿನ ಹೂ ತಪ್ಪಿದರೂ ವಾರದ ಎರಡು ದಿನ ಕ್ಷೇತ್ರಕ್ಕೆ ಬಂದು ಜನರೊಂದಿಗೆ ಬರೆಯುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ’ ಎಂದರು. ‘ಚುನಾವಣೆ ವೇಳೆ ಸಾಮಾಜಿಕ ಜಾಲತಾಣ ಬಳಸಿ ಮಾಡಿದ ಅಪಪ್ರಚಾರ, ಯಡಿಯೂರಪ್ಪ ಸಿ.ಎಂ ಆಗಲಿದ್ದಾರೆ ಎಂಬ ಕಾರಣಕ್ಕೆ ಜಾತಿ ಸಮೀಕರಣ. ನೇರ ಹಣಾಹಣಿಗೆ ಇಳಿಯದೇ ವಿರೋಧಿಗಳು ತಂತ್ರಗಾರಿಕೆಗೆ ಮೊರೆ ಹೋಗಿದ್ದು ಸೋಲಿಗೆ ಕಾರಣವಾಯಿತು’ ಎಂದರು.

‘ಪಕ್ಷೇತರ ಹಾಗೂ ಬಿಜೆಪಿ ಅಭ್ಯರ್ಥಿ ಕೈ ಜೋಡಿಸಿ ರೂಪಿಸಿದ ಷಡ್ಯಂತ್ರದಿಂದ ನನಗೆ ಸೋಲುಂಟಾಯಿತು. ಇಬ್ಬರೂ ಸೇರಿ ನನ್ನ ಮತಗಳನ್ನು ಗುರಿಯಾಗಿಸಿಕೊಂಡರು’ ಎಂದು ಹುನಗುಂದ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಜಯಾನಂದ ಕಾಶಪ್ಪನವರ ಹೇಳಿದರು.

ನನ್ನನ್ನು ಸೋಲಿಸಲೇಬೇಕು ಎಂಬ ಕಾರಣಕ್ಕೆ ರೂಪಿಸಿದ ಈ ವ್ಯವಸ್ಥಿತ ಷಡ್ಯಂತ್ರದ ಹಿಂದೆ ನಮ್ಮ ಪಕ್ಷದ ಜಿಲ್ಲಾ ಮಟ್ಟದ ನಾಯಕರು ಕೈ ಜೋಡಿಸಿದ್ದಾರೆ. ಅವರ ವಿರುದ್ಧ ಹೈಕಮಾಂಡ್‌ಗೆ ಲಿಖಿತವಾಗಿಯೇ ದೂರು ಸಲ್ಲಿಸುವೆ ಎಂದು ತಿಳಿಸಿದರು. ಬಿಜೆಪಿಯ ಬಂಡಾಯ ಅಭ್ಯರ್ಥಿ ಆ ಪಕ್ಷದ ಮತಗಳನ್ನೇ ಕೀಳಬೇಕಿತ್ತು. ಬದಲಿಗೆ ಕಾಂಗ್ರೆಸ್‌ನ ಮತಗಳ ಕಿತ್ತರು. ಚುನಾವಣೆಯಲ್ಲಿ ದುಡ್ಡು ಕೂಡ ಬಹಳಷ್ಟು ಕೆಲಸ ಮಾಡಿದೆ. ದುಡ್ಡು ಕೊಟ್ಟವರು ಜೊತೆಗೆ ಇರೊಲ್ಲ. ಕೇವಲ ಎಂಟು ತಿಂಗಳ ಹಿಂದೆ ಬಂದ ಪಕ್ಷೇತರ ಅಭ್ಯರ್ಥಿ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿಯೇ ಕೆಲಸ ಮಾಡಿದ್ದಾರೆ ಎಂದರು. ಸೋತ ಕಾರಣ ರಾಜಕೀಯದಿಂದ ದೂರ ಉಳಿಯುವುದಿಲ್ಲ. ನಮ್ಮ ಮನೆತನದಿಂದ ಮುಂದುವರೆಸಿಕೊಂಡು ಬಂದಿದ್ದೇವೆ. ಕ್ಷೇತ್ರದಲ್ಲಿಯೇ ಇದ್ದು, ಕಾರ್ಯಕರ್ತರು, ತಾಲ್ಲೂಕಿನ ಜನತೆಯ ಹಿತಕ್ಕಾಗಿ ದುಡಿಯುವೆ ಎಂದು ಕಾಶಪ್ಪನವರ ಹೇಳಿದರು.

‘ಕ್ಷೇತ್ರದಲ್ಲಿ ದುಡ್ಡು, ಜಾತಿ ಬಲ ಕೆಲಸ ಮಾಡಿತು. ನನ್ನ ಸೋಲಿಗೆ ಬೀಳಗಿ ಶಾಸಕ ಮುರುಗೇಶ ನಿರಾಣಿಯೇ ಕಾರಣ’ ಎಂದು ಜಮಖಂಡಿ ಕ್ಷೇತ್ರದಲ್ಲಿ ಎರಡನೇ ಸ್ಥಾನ ಪಡೆದ ಬಿಜೆಪಿ ಅಭ್ಯರ್ಥಿ ಶ್ರೀಕಾಂತ ಕುಲಕರ್ಣಿ ಆರೋಪಿಸಿದರು.

‘ಮೊದಲು ತಮಗೆ ಕೊನೆಗೆ ತಮ್ಮನಿಗೆ ಅಲ್ಲಿಂದ ಟಿಕೆಟ್‌ಗಾಗಿ ಪ್ರಯತ್ನಿಸಿದರು. ಹೈಕಮಾಂಡ್ ನನಗೆ ಟಿಕೆಟ್ ಕೊಟ್ಟಿತು. ಹಾಗಾಗಿ ಅವರ ಉದ್ದೇಶವೇ ನನ್ನ ಸೋಲಿಸುವುದೇ ಆಗಿತ್ತು. ಹಾಗಾಗಿ ಸಹೋದರನನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದರು. ಪಂಚಮಸಾಲಿ ಸಮಾಜದ ಮತ ನನಗೆ ಬಾರದಂತೆ ನೋಡಿಕೊಂಡರು. ಚುನಾವಣೆ ವೇಳೆ ಪ್ರತ್ಯಕ್ಷ ಹಾಗೂ ಅಪ್ರತ್ಯಕ್ಷವಾಗಿ ನನ್ನ ವಿರುದ್ಧ ಪ್ರಚಾರ ಮಾಡಿದರು. ಈ ಪಕ್ಷ ದ್ರೋಹವನ್ನು ಹೈಕಮಾಂಡ್ ಗಮನಕ್ಕೆ ತರುವೆ. ಅವರ ಜೊತೆ ಕೈ ಜೋಡಿಸಿರುವ ಸ್ಥಳೀಯ ಮುಖಂಡರ ವಿರುದ್ಧ ಕ್ರಮ ಕೈಗೊಂಡು ಪಕ್ಷದಿಂದ ಹೊರ ಹಾಕುವಂತೆ ಮನವಿ ಮಾಡುವೆ ಎಂದರು.

’ಇನ್ನೊಂದೆಡೆ ಶ್ರೀಶೈಲ ದಳವಾಯಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು ನನಗೆ ಹಿನ್ನಡೆ ಆಯ್ತು. ದಳವಾಯಿ ನಿಲ್ಲದಿದ್ದರೆ ಆ ಮತಗಳು ಬಿಜೆಪಿಗೆ ಬರುತ್ತಿದ್ದವು. ಇನ್ನು ಮುಂದೆ ಕೂಡ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿದು ಸಂಘಟನೆ ಮಾಡುವೆ. ಲೋಕಸಭಾ ಚುನಾವಣೆಗೂ ಕ್ಷೇತ್ರದಲ್ಲಿ ಪಕ್ಷವನ್ನು ಬಲಗೊಳಿಸುವೆ’ ಎಂದು ತಿಳಿಸಿದರು.

‘ಸೋಲಿಗೆ ಕಾರಣವಾದ ಕೆಲವು ಸಂಗತಿಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಜನರು ಮತ ಹಾಕಲಿಲ್ಲ ಹಾಗಾಗಿ ಸೋತಿದ್ದೇನೆ’ ಎಂದು ಬೀಳಗಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಜೆ.ಟಿ.ಪಾಟೀಲ ಪ್ರತಿಕ್ರಿಯಿಸಿದರು.

‘ಒಳಮೀಸಲಾತಿ ವಿಚಾರ, ತಿಮ್ಮಾಪುರಗೆ ಟಿಕೆಟ್ ಕೊಡದಿರುವುದು. ವೀರಶೈವ–ಲಿಂಗಾಯತ ವಿಚಾರ ಕೂಡ ತೊಂದರೆ
ಯಾಗಿದೆ. ನನ್ನ ಬೆಂಬಲಿಗರು, ಕಾರ್ಯಕರ್ತರು ಚೆನ್ನಾಗಿ ಕೆಲಸ ಮಾಡಿದ ಕಾರಣ ನಾನು 80 ಸಾವಿರ ಮತ ಪಡೆಯಲು ಸಾಧ್ಯವಾಯಿತು’ ಎಂದರು.

‘ಮುಂದೆ ಕಾಂಗ್ರೆಸ್–ಜೆಡಿಎಸ್ ಸರ್ಕಾರ ಬರುವುದು ಸತ್ಯ. ಕಾರ್ಯಕರ್ತರ ಹಿತ ಕಾಯುವೆ. ನಿರಂತರ ಸಂಪರ್ಕದಲ್ಲಿ ಇದ್ದು ರಕ್ಷಣೆ ಮಾಡುವೆ’ ಎಂದರು.

ಜನಾಭಿಪ್ರಾಯ ಒಪ್ಪಿಕೊಳ್ಳುವೆ: ಮೇಟಿ

‘ಜನಾಭಿಪ್ರಾಯ ಒಪ್ಪಿಕೊಳ್ಳುವೆ. ನಗರ ಭಾಗದಲ್ಲಿ ಮೊದಲಿನಿಂದಲೂ ಎದುರಾಳಿಗಳೇ ಮುಂಚೂಣಿಯಲ್ಲಿದ್ದಾರೆ. ಅದು ಈ ಬಾರಿ ಹೆಚ್ಚಳವಾಗಿದೆ. ಗ್ರಾಮೀಣ ಭಾಗದಲ್ಲಿ ನಮ್ಮದು ಎಂದು ಕೆಲವು ಕಡೆ ನಿರ್ಲಕ್ಷ್ಯ ಮಾಡಿದೆ. ನಮ್ಮ ಕೈಯಲ್ಲಿ ಚಲೋ ಹುಡುಗರು ಇದ್ದಾರೆ ಎಂದು ನಂಬಿದೆ. ಅದೇ ಹಿನ್ನಡೆಗೆ ಕಾರಣವಾಯಿತು. ಇನ್ನು ಮುಂದೆಯೂ ಕ್ಷೇತ್ರದಲ್ಲಿ ಸಕ್ರಿಯವಾಗಿರುವೆ. ತಿಮ್ಮಾಪುರ, ಬಾಗಲಕೋಟೆ ಎರಡೂ ಕಡೆ ಇದ್ದು ಬೆಂಬಲಿಗರ ಕಷ್ಟ, ಸುಖದಲ್ಲಿ ಭಾಗಿಯಾಗುವೆ. ನನಗೆ ಬೇರೆ ವ್ಯವಹಾರ ಇಲ್ಲ. ರಾಜಕೀಯ ಕ್ಷೇತ್ರ ಮಾತ್ರ ಗೊತ್ತಿದೆ. ಜನರನ್ನು ಬಿಟ್ಟು ನನಗೆ ಇರಲು ಆಗುವುದಿಲ್ಲ. ಮಕ್ಕಳು ಒಕ್ಕಲುತನ ಮಾಡುತ್ತಾರೆ. ಮೊಮ್ಮಕ್ಕಳು ಸಾಲಿಗೆ ಹೋಗ್ತಾರೆ. ನಾನು ಜನರೊಂದಿಗೆ ಇರುವೆ’ ಎಂದು ಮೇಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT