ಹೊಸಕೋಟೆ: ತಾಲ್ಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ಕೇಂದ್ರದ ರಸ್ತೆಯಂಚಿನಲ್ಲಿ ಕಸದ ದರ್ಬಾರು ಹೆಚ್ಚಾಗಿದ್ದು, ಸೂಕ್ತವಾಗಿ ವಿಲೇವಾರಿ ಮಾಡದೆ ಬೆಂಕಿ ಹಾಕಲಾಗುತ್ತಿದೆ.
ಮನೆಗಳ ಬಳಿ ಕಸ ಸಂಗ್ರಹ ಆದರೂ ಜನರು ರಸ್ತೆ ಬದಿಯಲ್ಲಿ ಕಸ ಬೀಸಾಕಿ ಹೋಗುತ್ತಾರೆ. ನಿತ್ಯ ಸುರಿಯುವ ಕಸ ವಿಲೇವಾರಿ ಆಗದೆ ರಾಶಿ ಆಗುತ್ತದೆ. ಜನ ಜನ ಕಸಕ್ಕೆ ಬೆಂಕಿ ಹಾಕುತ್ತಾರೆ. ಪ್ಲಾಸ್ಟಿಕ್ ಸೇರಿ ಯಾವುದೇ ತ್ಯಾಜ್ಯವನ್ನು ಸುಡಬಾರದು ಎಂಬ ನಿಯಮವಿದ್ದರೂ, ಗ್ರಾಮಸ್ಥರು ಕಸಕ್ಕೆ ಬೆಂಕಿ ಹಾಕುವ ಮೂಲಕ ತಮ್ಮ ಆರೋಗ್ಯವನ್ನು ತಾವೇ ಹದಗೆಡಿಸಿಕೊಳ್ಳುತ್ತಿದ್ದಾರೆ.
ಇದರಿಂದ ರಸ್ತೆಯಲ್ಲಿ ನಿತ್ಯ ಸಂಚಾರಿಸುವ ವಾಹನ ಸವಾರರಿಗೂ ಕಿರಿಕಿರಿ ಉಂಟಾಗುತ್ತದೆ.
ರಸ್ತೆಯಂಚಿನಲ್ಲಿ ಚರಂಡಿ, ವಿಭಜಕ ಇಲ್ಲದ ಕಾರಣ ಗಾಳಿ ಜೋರಾಗಿ ಬೀಸಿದರೆ ಬೆಂಕಿ ರಸ್ತೆಗೆ ಬರುತ್ತದೆ. ಇಲ್ಲಿನ ಸಂಚಾರ ಸವಾರರಿಗೆ ಅಪಾಯ ತರುವಂತಿದೆ.
ಕಸ ಸಂಗ್ರಹ ವೇಳೆ ಕಸ ನೀಡದೆ, ರಸ್ತೆ ಬದಿಯಲ್ಲಿ ಸುರಿಯುವ, ಬೆಂಕಿ ಹಾಕುವ ಜನರಿಗೆ ಗ್ರಾಮ ಪಂಚಾಯಿತಿಯಿಂದ ದಂಡ ವಿಧಿಸಿ, ಇನ್ಮುಂದೆ ಕಸ ಸುರಿಯದಂತೆ ಎಚ್ಚರಿಕೆ ನೀಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.