ಹೊಸಕೋಟೆ: ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಕೂಡಲೇ ಲಸಿಕೆ ನೀಡುವ ಕೆಲಸ ಮಾಡಬೇಕು ಎಂದು ಶಾಸಕ ಶರತ್ ಬಚ್ಚೇಗೌಡ ಆಗ್ರಹಿಸಿದರು.
ನಗರದಲ್ಲಿ ವಿವಿಧ ಆಸ್ಪತ್ರೆಗಳಿಗೆ ಸುಮಾರು ₹30 ಲಕ್ಷ ವೆಚ್ಚದ 5 ಎಚ್ಎಫ್ಎನ್ಸಿ ಯಂತ್ರ ಮತ್ತು ಬಿಪಾಸ್ ಆಕ್ಸಿಜನ್ ಪೂರೈಕೆ ಯಂತ್ರಗಳನ್ನು ವಿತರಿಸಿ ಮಾತನಾಡಿದರು.
ತಾಲ್ಲೂಕಿನ ವಿವಿಧ ಆಸ್ಪತ್ರೆಗಳಿಗೆ ಬೆಂಗಳೂರು, ಕೋಲಾರ, ಚಿಂತಾಮಣಿ ಸೇರಿದಂತೆ ಹೊರಗಿನಿಂದ ಬಂದು ಸೇರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಮ್ಮ ತಾಲ್ಲೂಕಿನವರಿಗೆ ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆಯಾಗಿದೆ. ಈಗವೈದ್ಯಕೀಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಾಗುತ್ತಿದ್ದು ಅವರಿಗೆ ಸಹಾಯವಾಗಲು ಬೆಂಗಳೂರಿನ ಆಕ್ಷನ್ ಕೋವಿಡ್ ಟೀಮ್ ಸಂಸ್ಥೆಯೊಂದಿಗೆ ಮಾತನಾಡಿ ಯಂತ್ರಗಳನ್ನು ತಾಲ್ಲೂಕಿನ ವಿವಿಧಆಸ್ಪತ್ರೆಗಳಿಗೆ ನೀಡಲಾಗುತ್ತಿದೆ ಎಂದರು.
ರಾಜ್ಯ ಸರ್ಕಾರ ಹೊಸಕೋಟೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಅವಶ್ಯವಿರುವಷ್ಟು ಆಮ್ಲಜನಕ ಮತ್ತು ಲಸಿಕೆ ನೀಡುತ್ತಿಲ್ಲ. ಕೂಡಲೇ ಅದನ್ನು ವಿತರಿಸುವ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಆಕ್ಷನ್ ಕೋವಿಡ್ ಟೀಮ್ ಸಂಸ್ಥೆಯ ವಿಜಯ್, ತಾಲ್ಲೂಕು ವೈದ್ಯಾಧಿಕಾರಿ ಡಾ.ಉಮೇಶ್, ಎಂವಿಜೆ ಆಸ್ಪತ್ರೆಯ ಮುಖ್ಯಸ್ಥೆ ಡಾ. ಧರಣೀ, ಪ್ರಾಶಂಪಾಲರಾದ ಮೋಹನ್,ಡಾ. ಪ್ರಮೋದ್ ಇದ್ದರು.