ದೊಡ್ಡಬಳ್ಳಾಪುರ: ‘ಕಲಾವಿದರ ಬಗ್ಗೆ ಸರ್ಕಾರಕ್ಕೆ ಯಾವುದೇ ಪ್ರೀತಿ ಇಲ್ಲ. ಕಲಾವಿದರಿಗೆ ಪ್ರೋತ್ಸಾಹ ಸಿಗದಿದ್ದರೆ ಕಲೆ ಮೂಲೆಗುಂಪಾಗಲಿದೆ’ ಎಂದು ಜನಪದ ಗಾಯಕ ಡಾ.ಅಪ್ಪಗೆರೆ ತಿಮ್ಮರಾಜು ವಿಷಾದ ವ್ಯಕ್ತಪಡಿಸಿದರು.
ನಗರದ ಪ್ರಿಯದರ್ಶಿನಿ, ಯೋಗಿ ನಾರಾಯಣ, ಟಿ.ಬಿ.ನಾರಾಯಣಪ್ಪ ಬಡಾವಣೆಗಳ ಸಾರ್ವಜನಿಕರಿಂದ ನಡೆದ ಮೂರು ದಿನಗಳ ಮುತ್ಯಾಲಮ್ಮ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ಜನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಯುವಸಮುದಾಯ ಪಾಶ್ಚಾತ್ಯ ಸಂಗಿತದಲ್ಲಿ ಕಳೆದುಹೋಗುತ್ತಿದೆ. ಈ ನೆಲದ ಸೊಗಡಿನ ಗಂಡು ಕಲೆಗಳಾದ ಜನಪದ ಸಾಹಿತ್ಯ, ಗೀತೆ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
‘ನೆಲದ ಮಣ್ಣಿನ ವಾಸನೆ ಮರೆಯುತ್ತಿರುವುದು ಬಹುದೊಡ್ಡ ಸಾಂಸ್ಕೃತಿಕ ವಿಘಟನೆ. ಪೋಷಕರು ಮಕ್ಕಳನ್ನು ಮದುವೆ, ಇತರೆ ಖಾಸಗಿ ಕಾರ್ಯಕ್ರಮಗಳಿಗೆ ಕೆರೆದುಕೊಂಡು ಹೋಗದಿದ್ದರೂ ಪರವಾಗಿಲ್ಲ. ಸಂಗೀತ ಕಚೇರಿ ಕಾರ್ಯಕ್ರಮಗಳಿಗೆ ಕರೆ ತಂದರೆ ಒಂದಿಷ್ಟು ಈ ನೆಲದ ಸಾಹಿತ್ಯದ ಪರಿಚಯವಾಗುತ್ತದೆ. ಇದರಿಂದ ಉತ್ತಮ ಸಂಸ್ಕಾರ ಬೆಳೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜನಪದ ಹಾಡುಗಳನ್ನು ಸಾದರಪಡಿಸಿದ ಅಪ್ಪಗೆರೆ ತಿಮ್ಮರಾಜು ಅವರು ಹೊಸಲೋಕವನ್ನೇ ಸೃಷ್ಟಿಸಿದರು. ಹಾಡಿನ ಜತೆಗೆ ಭಾವಾರ್ಥ ವಿವರಿಸಿ ಕೇಳುಗರಿಗೆ ರಂಜನೆ ನೀಡಿದರು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ‘ಇಲ್ಲಿನ ಮೂರು ಬಡಾವಣೆಗಳಿಗೆ ನನ್ನ ಶಕ್ತಿ ಮೀರಿ ಮೂಲಭೂತ ಸೌಕರ್ಯ ಒದಗಿಸುವುದಾಗಿ’ ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸದಸ್ಯ ಹಸನ್ಘಟ್ಟ ರವಿ, ಕಾರ್ಯಕ್ರಮದ ಪ್ರಾಯೋಕರಾಗಿ ಮೂರು ಬಡಾವಣೆ ಬಹುತೇಕ ಶಿಕ್ಷಕರು, ವಿವಿಧ ಇಲಾಖೆಗಳ ಸರ್ಕಾರಿ ಉದ್ಯೋಗಿಗಳು, ಉದ್ಯಮಿಗಳು ಇದ್ದರು.