ದೊಡ್ಡಬಳ್ಳಾಪುರ: ನೇಕಾರ ಉತ್ಪನ್ನಗಳಿಗೆ ಕೇಂದ್ರ ಸರ್ಕಾರ ಶೇ 5 ರಿಂದ 12 ಕ್ಕೆ ಜಿಎಸ್ಟಿ ಏರಿಸಿರುವುದನ್ನು ಶೇ 5ಕ್ಕೆ ಇಳಿಸುವಂತೆ ದೊಡ್ಡಬಳ್ಳಾಪುರದ ನೇಕಾರ ವೇದಿಕೆಯಿಂದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಟಿ.ಬಿ.ನಾಗರಾಜು ಹಾಗೂ ಜಿಲ್ಲಾದಿಕಾರಿ ಕೆ.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್ ಹೊಡೆತದಿಂದ ನೇಕಾರರು ಈಗಾಗಲೆ ಆರ್ಥಿಕ ಹೊಡೆತಕ್ಕೆ ಗುರಿಯಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಜಿಎಸ್ಟಿ ಶೇ 12ಕ್ಕೆ ಏರಿಸಿರುವುದು ನೇಕಾರ ಉದ್ಯಮಕ್ಕೆ ಸಂಕಷ್ಟ ತಂದಿದೆ. ದೊಡ್ಡಬಳ್ಳಾಪುರದಲ್ಲಿ ಸುಮಾರು 35 ಸಾವಿರಕ್ಕೂ ಹೆಚ್ಚು ಮಂದಿ ನೇಕಾರಿಕೆಯಲ್ಲಿ ತೊಡಗಿದ್ದಾರೆ. ನೇಕಾರಿಕೆ ಗೃಹ ಉದ್ಯಮವಾಗಿದ್ದು, ಮನೆ ಮಂದಿಯೆಲ್ಲ ನೇಕಾರಿಕೆಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಇಲ್ಲಿ ತಯಾರಾಗುವ ಸೀರೆಗಳು ಮದುವೆ, ಹಬ್ಬಗಳಲ್ಲಿ ಮಾತ್ರ ಮಾರಾಟವಾಗುತ್ತವೆ. ಹೀಗಾಗಿ ವರ್ಷದಲ್ಲಿ ಆರು ತಿಂಗಳು ದಾಸ್ತಾನು ಮನೆಯಲ್ಲೆ ಉಳಿದಿರುತ್ತದೆ. ಹೀಗಾಗಿ ನೇಕಾರಿಕೆ ಉದ್ಯಮ ನಡೆಸಲು ಕಷ್ವಾಗುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೂಡಲೆ ಶೇ5ಕ್ಕೆ ಜಿಎಸ್ಟಿಯನ್ನು ಇಳಿಸಬೇಕು ಎಂದು ಮನವಿ ಮಾಡಿದ್ದಾರೆ.
ನಗರಸಭೆ ಅಧ್ಯಕ್ಷೆ ಎಸ್.ಸುಧಾರಾಣಿ ಲಕ್ಷ್ಮಿನಾರಾಯಣ್, ನೇಕಾರ ವೇದಿಕೆ ಶ್ರೀನಿವಾಸಲು, ಎಸ್.ವೇಣುಗೋಪಾಲ್, ಪಿ.ಎ.ವೆಂಕಟೇಶ್, ಜನಪರ ಮಂಜು ಇದ್ದರು.