ಹಿನ್ನೆಲೆ: ಕಾಡಿನ ಮಧ್ಯದಲ್ಲಿರುವ ಶಂಕರನಹಳ್ಳಕ್ಕೆ ತನ್ನದೇ ಆದ ಪ್ರಾಚೀನ ಹಿನ್ನೆಲೆ ಇದೆ. ಸುಮಾರು 500 ವರ್ಷಗಳ ಹಿಂದೆ ಗುಮ್ಮಳಾಪುರ ಪ್ರಸಿದ್ಧ ಶರಣ ಕ್ಷೇತ್ರವಾಗಿತ್ತು. ಈ ಸಂದರ್ಭದಲ್ಲಿ ಗುಮ್ಮಳಾಪುರಕ್ಕೆ ಶಂಕರಪ್ಪ, ಬಂಕದಪ್ಪ ಎಂಬ ಇಬ್ಬರು ಶರಣರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಶರಣರಿಗೂ, ಕೆಲವು ಗ್ರಾಮಸ್ಥರಿಗೂ ಜಗಳ ನಡೆದು ಬಂಕದಪ್ಪ ಹತನಾದ ಎನ್ನಲಾಗಿದೆ. ಜನರು ಊಟ ಸಹ ನೀಡದೇ ಶಂಕರಪ್ಪ ಉಪವಾಸ ಬೀಳುವಂತಾಯಿತು. ಗ್ರಾಮದ ಬೇಡನೊಬ್ಬನಿಗೆ ಕರುಣೆ ಬಂದು ಹೊಸ ಮಡಿಕೆಯಲ್ಲಿ ನೀರು ತಂದುಕೊಟ್ಟು ಆಗ ಶರಣ ಶಂಕರಪ್ಪ ನೀರು ಕುಡಿದು ಇಷ್ಟು ಮನೆಗಳಿದ್ದರೂ ಇವರ್ಯಾರು ಸಹ ನನ್ನ ನೆರವಿಗೆ ಬಂದಿಲ್ಲ. ಇವರು ನಾಶವಾಗಲಿ ಎಂದು ಶಾಪ ನೀಡಿ ಇಂತಹ ಪ್ರದೇಶದಲ್ಲಿ ಇರುವುದೇ ಬೇಡ ಎಂದು ಕಾಡಿನ ಹಾದಿ ಹಿಡಿದ ಎನ್ನುವುದು ಪ್ರತೀತಿ.