ದೇವನಹಳ್ಳಿ: ಮಾನವನ ಅಳಿವು ಉಳಿವು ಪರಿಸರದ ಮೇಲೆ ನಿಂತಿದೆ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಬಿ.ಕೆ. ಶಿವಪ್ಪ ಹೇಳಿದರು.
ಇಲ್ಲಿನ ಎಸ್.ಎಲ್.ಎಸ್ ಶಾಲಾ ಆವರಣದಲ್ಲಿ ಸ್ಕೌಟ್ಸ್ ಹಾಗೂ ಎಸ್.ಎಲ್.ಎಸ್. ಶಾಲಾ ಆಡಳಿತ ಮಂಡಳಿ ಸಹಭಾಗಿತ್ವದಲ್ಲಿ ನಡೆದ 2019–20ನೇ ಸಾಲಿನ ಜಿಲ್ಲಾ ಮಟ್ಟದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿ ಪಡಿಸುವ ನೆಪದಲ್ಲಿ ಪರಿಸರದಲ್ಲಿನ ವನ್ಯ ಸಂಪತ್ತು ಕರಗುತ್ತಿದೆ, ಗಣಿಗಳು, ಕಾರ್ಖಾನೆಗಳು, ದುಪ್ಪಟ್ಟು ವಾಹನ ಸಂಚಾರದಿಂದ ವಾಯು, ಶಬ್ದ, ಕುಡಿಯುವ ನೀರು ಮಾಲಿನ್ಯಗೊಂಡು ಆರೋಗ್ಯಯುತ ಸಮಾಜಕ್ಕೆ ಕಂಟಕವಾಗಿ ಪರಿಣಮಿಸಿದೆ ಎಂದು ಹೇಳಿದರು.
ಅಂತರ್ಜಲ ಕುಸಿಯುತ್ತಿದೆ ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ, ಕೆರೆ ಕುಂಟೆಗಳಲ್ಲಿ ಹೂಳು ತುಂಬಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಪರಿಸರ ನಾಶದಿಂದಾಗಿ ಋತುಮಾನಗಳೇ ಏರುಪೇರಾಗುತ್ತಿದೆ ಪರಿಸರದ ಸಮತೋಲನ ಕಾಯ್ದುಕೊಳ್ಳದಿದ್ದರೆ ಭವಿಷ್ಯದ ಮನುಕುಲಕ್ಕೆ ಉಳಿಗಾಲವಿಲ್ಲ ಎಂದು ಹೇಳಿದರು.
ಸ್ಕೌಟ್ಸ್ ಜಿಲ್ಲಾ ಘಟಕ ಸಹಾಯಕ ಆಯುಕ್ತ ವೆಂಕಟರಾಜು ಮಾತನಾಡಿ, ಹಲವು ದಶಕಗಳ ಹಿಂದೆ ಗ್ರಾಮಗಳಲ್ಲಿರುವ ಮರಗಳೆ ಕಾಡಿನಂತಿರುತ್ತಿದ್ದವು, ಗಿಡಮರ ಬೆಳವಣಿಗೆಯಿಂದ ಮಣ್ಣಿನ ಸವಕಳಿ ತಡೆಗಟ್ಟಿ ಜಲಮೂಲ ರಕ್ಷಣೆ ಜೊತೆ ಮೋಡಗಳನ್ನು ತಡೆದು ಮಳೆಸುರಿಯುವುದಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ಕೌಟ್ಸ್ ಜಿಲ್ಲಾ ಘಟಕ ಸಹಾಯಕ ಆಯುಕ್ತ ಶ್ರೀಕಾಂತ್, ಜಿಲ್ಲಾ ಘಟಕ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್, ತಾಲ್ಲೂಕು ಘಟಕ ಕಾರ್ಯದರ್ಶಿ ಸೀತಾರಾಮು, ರೇಂಜರ್ ದೀಪಿಕಾ, ಶಾಲಾ ಸಿಬ್ಬಂದಿ ಇದ್ದರು.