ವಿಜಯಪುರ (ದೇವನಹಳ್ಳಿ): ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎಂಬ ಗಾದೆ ಮಾತಂತೆ ಬೇಸಿಗೆ ಬಂತೆಂದರೆ ಮಾರುಕಟ್ಟೆಯಲ್ಲಿ ಹಲಸು, ಮಾವಿನದೇ ರಾಜ್ಯಭಾರ. ಆದರೆ ಬೆಳೆದ ರೈತರಿಗೆ ಈ ಬಾರಿಯಾದರೂ ಉತ್ತಮ ಬೆಲೆ ಸಿಗಲಿ ಎಂಬ ನಿರೀಕ್ಷೆ.
ಹಾಗಾಗಿ ರೈತರು ಹಲಸಿನ ಕಾಲದಲ್ಲಿ ಜೀವನ ನಿರ್ವಹಣೆಗಾಗಿ ಕೆಲವು ರೈತರು ರಸ್ತೆ ಬದಿಗಳಲ್ಲಿ ಹಲಸು ಹಣ್ಣನ್ನು ಮಾರಾಟ ಮಾಡಿದರೆ, ಇನ್ನೂ ಕೆಲವು ತೊಳೆ ತೆಗೆದು ಮಾರಾಟ ಮಾಡಿ ಜೀವನ ನಡೆಸುವ ಮಾರ್ಗವನ್ನು ಕಂಡುಕೊಂಡಿರುತ್ತಾರೆ.
ಬಡವರ ಹಣ್ಣು ಎಂದೇ ಖ್ಯಾತಿ ಪಡೆದಿರುವ ಹಲಸು, ಮಾವು, ಬಾಳೆಗಳಂತೆ ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಹೆಚ್ಚು ಲಾಭದಾಯಕವಾಗಿದೆ. ಹಣ್ಣು 5 ಕೆಜಿಯಿಂದ 50 ಕೆಜಿಯವರೆಗೂ ತೂಕ ಬರುತ್ತದೆ.
ತಾಲ್ಲೂಕಿನ ರೈತರು, ತಮ್ಮ ತೋಟಗಳಲ್ಲಿ ವಿವಿಧ ಜಾತಿಯ ಹಲಸಿನ ಮರಗಳನ್ನು ನೆಟ್ಟು ಪೋಷಣೆ ಮಾಡುತ್ತಾರೆ. ಮರಗಳಲ್ಲಿ ಹಣ್ಣು ಬಿಟ್ಟ ನಂತರ ಕೆಲವರು ಕಟಾವು ಮಾಡಿ ಮಾರುಕಟ್ಟೆಗೆ ಹಾಕಿದರೆ, ಇನ್ನೂ ಕೆಲವರು ಗ್ರಾಮಗಳಲ್ಲೇ ಮಾರಾಟ ಮಾಡುತ್ತಾರೆ.
ಕೆಲ ವ್ಯಾಪಾರಿಗಳು, ಜನವರಿ-ಫೆಬ್ರುವರಿಯಲ್ಲಿ ಮರಗಳನ್ನು ವ್ಯಾಪಾರ ಮಾಡಿ, ಏಪ್ರಿಲ್-ಮೇ ತಿಂಗಳಿನಲ್ಲಿ ಹಲಸಿನ ಹಣ್ಣುಗಳನ್ನು ಕಟಾವು ಮಾಡಿ ಮಾರಾಟ ಮಾಡುತ್ತಾರೆ. ದೊಡ್ಡ ಗಾತ್ರದ ಹಲಸಿನ ಹಣ್ಣು ₹ 100 ರಿಂದ ₹ 150 ರವರೆಗೆ ಮಾರಾಟವಾಗುತ್ತದೆ.
ಹಳಸಿನ ತಳಿಗಳು: ಹಳದಿ ಬಣ್ಣ ತೊಳೆಯ ಹಲಸು, ಕೆಂಪು ಬಣ್ಣ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾದ ನಾನಾ ವಿಧದ ಹಲಸಿನ ಹಣ್ಣುಗಳ ಮಾರಾಟ ನಡೆಯುತ್ತಿದೆ. ಹಲಸಿನ ಹಣ್ಣಿನ ಗಾತ್ರ, ತಳಿ, ವೈವಿಧ್ಯತೆ ಅನುಗುಣವಾಗಿ ₹ 50 ರಿಂದ ₹ 150 ರೂಗಳವರೆಗೆ ಮಾರಾಟವಾಗುತ್ತಿವೆ.
ಕಳೆದ ವರ್ಷದಲ್ಲಿ ಉತ್ತಮ ಮಳೆಯಾಗಿರುವುದರಿಂದ ಹಲಸಿಗೆ ಈ ಬಾರಿ ಉತ್ತಮ ಇಳುವರಿ ಬರುವ ನಿರೀಕ್ಷೆಯಿದೆ