ದೇವನಹಳ್ಳಿ: ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟ 640 ಪೂರೈಸಿದೆ. ನೂತನ ನಾಡ ಕಚೇರಿ ಕಟ್ಟಡ ಉದ್ಘಾಟನೆ ನಿಗದಿಯಾಗಿದೆ. ಆದರೆ ಭೂ ಸ್ವಾಧೀನದಿಂದ ಭೂಮಿಯೇ ಇಲ್ಲದಿದ್ದರೆ, ಇಲ್ಲಿ ನಾಡಕಚೇರಿ ಏಕೆ ಬೇಕು? ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಸದಸ್ಯರು ಪ್ರಶ್ನಿಸಿದರು.
ತಾಲ್ಲೂಕು ಚನ್ನರಾಯಪಟ್ಟಣ ನಾಡಕಚೇರಿ ಮುಂಭಾಗ ನಡೆಯುತ್ತಿರುವ ರೈತ ಧರಣಿಯಲ್ಲಿ ಹೋರಾಟಗಾರ ನಂಜಪ್ಪ ಮಾತನಾಡಿ, ‘ಕಳೆದ 640 ದಿನಗಳಿಂದ 13 ಹಳ್ಳಿಗಳ ರೈತರು ಮತ್ತು ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ನಮ್ಮ ತಾಳ್ಮೆಯನ್ನು ದೌರ್ಬಲ್ಯವೆಂದು ಭಾವಿಸಿ ನಾಡಕಚೇರಿ ಉದ್ಘಾಟನೆಗೆ ಸಜ್ಜಾಗಿರುವ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ನಡೆಯನಬ್ನು ಖಂಡಿಸುತ್ತೇವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾಡಕಚೇರಿ ಉದ್ಘಾಟನೆಯಂದು ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಎಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದು ಎಂಟು ತಿಂಗಳ ಕಳೆದರೂ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಲಕ್ಷಣವಿಲ್ಲ. ಅಧಿಕಾರವಿಲ್ಲದಾಗ ಹಾಡಿದ ಮಾತುಗಳು ಅಧಿಕಾರಕ್ಕೆ ಬಂದಾಗ ಮರೆತಿರುವುದು ಆತಂಕ ಮೂಡಿಸಿದೆ ಎಂದು ಹೇಳಿದರು.
ನಿರಂತರ ಹೋರಾಟದಿಂದ ಕಳೆದ ಅಕ್ಟೋಬರ್ 18ರಂದು ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ಮತ್ತು ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಅವರ ನೇತೃತ್ವದಲ್ಲಿ ನಡೆದ ಸಭೆ ವಿಫಲವಾಗಿದೆ. ಮತ್ತೊಂದು ಸಭೆ 10 ದಿನಗಳಲ್ಲಿ ನಡೆಸಿ ರೈತರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಆದರೆ ಇದುವರೆಗೂ ಈ ಬಗ್ಗೆ ಯಾರು ಸೊಲ್ಲು ಎತ್ತಿಲ್ಲ. ಇದು ರೈತರ ಬಗೆಗಿನ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಎಂದು ಹೇಳಿದರು.
ರೈತರು ನಾಡಕಚೇರಿ ಉಪ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಹೋರಾಟಗಾರರಾದ ಅಶ್ವತಪ್ಪ, ಮುಕುಂದ, ನಲ್ಲೂರು ಗೋಪಿನಾಥ್, ವೆಂಕಟರಮಣಪ್ಪ, ಗೋವಿಂದ್ ರಾಜ್, ಸುಬ್ರಮಣಿ ಹಾಗೂ ರೈತರು ಇನ್ನು ಮುಂತಾದವರು ಹಾಜರಿದ್ದರು.