ಆನೇಕಲ್: ತಾಲ್ಲೂಕಿನ ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘದ ನೂತನ ಕಟ್ಟಡವನ್ನು ಶಾಸಕ ಬಿ.ಶಿವಣ್ಣ ಉದ್ಘಾಟಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಆರ್ಥಿಕ ಪ್ರಗತಿಗೆ ಸಹಕಾರ ಕ್ಷೇತ್ರ ಪೂರಕವಾಗಿದೆ. ಜನರ ಅಭಿವೃದ್ಧಿಯಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಗುಡಿ ಕೈಗಾರಿಕೆ, ಹೈನುಗಾರಿಕೆ, ಕೃಷಿ ಚಟುವಟಿಕೆಗಳಿಗೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಸೌಲಭ್ಯ ಸದುಪಯೋಗಪಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದರು.
ಸಹಕಾರ ಸಂಘಗಳಿಗೆ ಉತ್ತಮ ಕಟ್ಟಡ ಸೇರಿದಂತೆ ಮೂಲ ಸೌಲಭ್ಯ ಸಿಗಬೇಕು. ಹಾರಗದ್ದೆ ವ್ಯವಸಾಯ ಸೇವಾ ಸಹಕಾರ ಸಂಘದ ಕಟ್ಟಡದಲ್ಲಿ ಎಲ್ಲ ಸೌಲಭ್ಯ ಕಲ್ಪಿಸಿರುವುದರಿಂದ ಜನರಿಗೆ ಅನುಕೂಲವಾಗಿದೆ. ಸಹಕಾರ ಸಂಘಗಳಲ್ಲಿ ಒಗ್ಗಟ್ಟು ಇದ್ದಾಗ ಉತ್ತಮವಾದದ್ದನ್ನು ಸಾಧಿಸಬಹುದಾಗಿದೆ ಎಂದರು.
ಬಮೂಲ್ ನಿರ್ದೇಶಕ ಬಿ.ಜಿ.ಆಂಜಿನಪ್ಪ ಮಾತನಾಡಿ, ಸಹಕಾರ ಸಂಘಗಳ ಕಟ್ಟಡ ನಿರ್ಮಾಣಕ್ಕೆ ಬಿಡಿಸಿಸಿ ಬ್ಯಾಂಕ್ ಅನುದಾನ ನೀಡಲಿದೆ. ತಾಲ್ಲೂಕಿನಲ್ಲಿ ಸಹಕಾರ ಕ್ಷೇತ್ರ ಬಲಗೊಳಿಸಲು ಎಲ್ಲ ಸಂಘಗಳು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ ಮಾತನಾಡಿ, ಸ್ವಾವಲಂಭಿ ಬದುಕು ಸಹಕಾರ ಸಂಘಗಳ ಉದ್ದೇಶವಾಗಿದೆ. ಸಂಘಗಳ ಆಡಳಿತ ಮಂಡಳಿಯು ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಲು ಎಲ್ಲ ಕ್ರಮಕೈಗೊಳ್ಳಬೇಕು ಎಂದರು.
ಹಾರಗದ್ದೆ ವಿಎಸ್ಎಸ್ಎನ್ ಅಧ್ಯಕ್ಷ ಬಿ.ಮುನಿರಾಜು, ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಇಂಡ್ಲವಾಡಿ ನಾಗರಾಜು, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್, ನಿರ್ದೇಶಕ ಸೋಮಶೇಖರರೆಡ್ಡಿ, ಮುಖಂಡರಾದ ಕೆ.ಎಸ್.ನಟರಾಜ್, ಎನ್.ಬಿ.ಐ.ನಾಗರಾಜು, ಕೇಶವಮೂರ್ತಿ, ಮುನಿರಾಜು, ಹಾ.ವೆ.ವೆಂಕಟೇಶ್, ಸಿ.ಎನ್.ಆರ್.ರವಿಚಂದ್ರ, ಎನ್.ಎಸ್.ರವಿಚಂದ್ರ, ಪ್ರಭಾಕರ್, ವಿಎಸ್ಎಸ್ಎನ್ ನಿರ್ದೇಶಕರಾದ ಪಿ.ಧನಂಜಯ ಹೇಮಂತ್ ಅಭಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.