ತಾಲ್ಲೂಕಿನಲ್ಲಿ ಮುಂಗಾರು ಮಳೆಗೆ ತೊಗರಿ, ಅಲಸಂದೆ, ಅವರೆ, ಮೆಕ್ಕೆಜೋಳ, ಕಡಲೆಕಾಯಿ ಬಿತ್ತನೆ ಮಾಡಲಾಗುತ್ತದೆ. ಜುಲೈ ತಿಂಗಳ ಮಧ್ಯಭಾಗದಿಂದ, ಆಗಸ್ಟ್ ತಿಂಗಳ ಮಧ್ಯಭಾಗದವರೆಗೆ ರಾಗಿ ಬಿತ್ತನೆಯಾಗುತ್ತದೆ. ಆದರೆ, ಮಳೆಯ ಕಾಟದಿಂದ ಈ ಬಾರಿ ರೈತರು ಸಕಾಲಕ್ಕೆ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಬಿತ್ತನೆ ಆಗಿದ್ದರೂ ಅದರ ಬೇಸಾಯಕ್ಕೆ ಮಳೆ ಬಿಡುವು ಕೊಡುತ್ತಿಲ್ಲ. ತಗ್ಗುಪ್ರದೇಶಗಳಲ್ಲಿ ನೀರು ನಿಂತಿದ್ದು ಬಿತ್ತನೆಯಾಗಿರುವ ರಾಗಿ, ತೊಗರಿ, ಅವರೆ, ಜೋಳ ಸಂಪೂರ್ಣ ಮುಳುಗಿ ಕೊಳೆಯುವ ಸ್ಥಿತಿ ಮೂಡಿದೆ. ನಿರಂತರ ಮಳೆಯಿಂದ ಕಳೆ ಹೆಚ್ಚಾಗಿದೆ. ಬೆಳೆಗಳಿಗಿಂತ ಕಳೆಯೇ ಹೊಲಗಳಲ್ಲಿ ಕಾಣಿಸುತ್ತಿದೆ. ಒಂದಷ್ಟು ದಿನಗಳ ಕಾಲ ಮಳೆ ಬಿಡುವು ಕೊಟ್ಟಿದ್ದರೆ ಬೇಸಾಯಕ್ಕೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ಯುವ ರೈತ ಜಗದೀಶ್.