ಆನೇಕಲ್:ಕವಿ ಡಾ.ಸಿದ್ಧಲಿಂಗಯ್ಯ ಅವರು ತಮ್ಮ ಕಾವ್ಯ, ಕಥೆ, ನಾಟಕಗಳ ಮೂಲಕ ಶೋಷಿತರು ಮತ್ತು ಹಿಂದುಳಿದ ವರ್ಗಗಳ ದನಿಯಾಗಿದ್ದರು ಎಂದು ಪ್ರಜಾ ವಿಮೋಚನಾ ಚಳವಳಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ತಿಳಿಸಿದರು.
ಅವರು ಪಟ್ಟಣದಲ್ಲಿ ಪ್ರಜಾ ವಿಮೋಚನಾ ಚಳವಳಿ ಸಂಘಟನೆಯಿಂದ ಆಯೋಜಿಸಿದ್ದ ಡಾ.ಸಿದ್ಧಲಿಂಗಯ್ಯ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
21ನೇ ವಯಸ್ಸಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡ ಸಿದ್ಧಲಿಂಗಯ್ಯ ಅವರು ರಾಜ್ಯದಲ್ಲಿ ಪ್ರಮುಖ ಸಂಘಟನೆಯಾಗಿದ್ದ ದಲಿತ ಸಂಘರ್ಷ ಸಮಿತಿಯ ರಚನೆಯಲ್ಲಿ ಪಾತ್ರ ವಹಿಸಿದ್ದರು. ತಮ್ಮ ಹಾಡುಗಳ ಮೂಲಕ ಹೋರಾಟದ ಕಿಚ್ಚನ್ನು ಹಬ್ಬಿಸಿದ್ದರು ಎಂದರು.
ಸಿದ್ದಲಿಂಗಯ್ಯ ಅವರ ಬದುಕು ಬರಹ ಮತ್ತು ವಿಚಾರಧಾರೆ ಬಿಂಬಿಸುವ ಸ್ಮಾರಕವೊಂದನ್ನು ಜ್ಞಾನಭಾರತಿ ಆವರಣದಲ್ಲಿ ತೆರೆಯಬೇಕು. ಪದ್ಮಶ್ರೀ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ರವಿ, ಮುಖಂಡರಾದ ಹೊಂಪಲಘಟ್ಟ ಮುನಿಯಪ್ಪ, ಲವ, ಚಿರಂಜೀವಿ, ಸಬ್ಮಂಗಲ ರವಿ, ಆರ್. ವೆಂಕಟೇಶ್, ಗಣೇಶ್, ಚಂದ್ರಶೇಖರ್, ಮುರುಗೇಶ್, ನಾಗರಾಜು ಹಾಜರಿದ್ದರು.