ಒಂದು ವರ್ಷದಿಂದ ಬೆಟ್ಟದಲ್ಲಿ ಚಿರತೆ ಇದ್ದು, ಬೆಟ್ಟದ ಸುತ್ತಲೂ ಬೆಳಗ್ಗೆ ಮತ್ತು ಸಂಜೆ ವೇಳೆ ರಸ್ತೆಗಳಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದು ಹಲವು ಬಾರಿ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆರಂಭದಲ್ಲಿ ಅರಣ್ಯ ಇಲಾಖೆ ತಲೆ ಕೆಡಿಸಿಕೊಂಡಿರಲಿಲ್ಲ. ಚಿರತೆ ಇರುವುದು ಸುಳ್ಳು, ಕಲ್ಲುಗಣಿ ಅಕ್ರಮವಾಗಿ ನಡೆಸಲು ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದೇ ಕೆಲವರು ನಂಬಿದ್ದರು. ಒಂದೆರಡು ಗ್ರಾಮಗಳಿಗೆ ನುಗ್ಗಿ, ಮನೆಯ ಅಕ್ಕಪಕ್ಕದಲ್ಲಿ ಚಿರತೆ ಸದ್ದು ಕೇಳಿಸಿಕೊಂಡ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿಣಾಮ ಬೋನು ಇಡಲಾಗಿತ್ತು.