ಆಗಸ್ಟ್ 17ರಂದು ಕೋಡಿಹಳ್ಳಿ ಸಮೀಪದ ಕೆರಳಾಲಾಸಂದ್ರ ಗ್ರಾಮದಲ್ಲಿ ಸುಮಾರು ಒಂದೂವರೆ ವರ್ಷದ ಕಾಡೆಮ್ಮೆಯೊಂದು ಗಾಯಗೊಂಡು ನಿಶ್ಯಕ್ತಿಯಿಂದ ಬಿದ್ದಿತ್ತು. ಸ್ಥಳೀಯ ರೈತರು ಗಮನಿಸಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬನ್ನೇರುಘಟ್ಟ ಜೈವಿಕ ಉದ್ಯಾನದ ಆಸ್ಪತ್ರೆಯ ತಂಡವು ಅರಣ್ಯಾಧಿಕಾರಿಗಳ ನೆರವಿನೊಂದಿಗೆ ಕಾಡೆಮ್ಮೆಯನ್ನು ಸಂರಕ್ಷಿಸಿ ಬನ್ನೇರುಘಟ್ಟಕ್ಕೆ ತರಲಾಗಿದೆ. ಕಾಡೆಮ್ಮೆಯ ಮುಂಭಾಗದ ಬಲಗಾಲು ಮುರಿದುಹೋಗಿದ್ದು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಹೆಬ್ಬಾಳ ಪಶು ವೈದ್ಯಕೀಯ ಕಾಲೇಜಿನ ಉಪನ್ಯಾಸಕ ಪ್ರೊ.ನಾಗರಾಜು, ನಿವೃತ್ತ ರೀಡರ್ ಡಾ.ವಸಂತ್ ಶೆಟ್ಟಿ ಮತ್ತು ಉದ್ಯಾನದ ವೈದ್ಯ ಡಾ.ಉಮಾಶಂಕರ್ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗಿದೆ.