ವಿಜಯಪುರ: ಚನ್ನರಾಯಪಟ್ಟಣ ಹೋಬಳಿ ಟಿ.ಅಗ್ರಹಾರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪರಿವರ್ತನಾ ಕಲಾ ಸಂಸ್ಥೆಯ ವತಿಯಿಂದ ಶಿವಕುಮಾರ ಸ್ವಾಮೀಜಿ ಅವರ ನೆನಪಿಗಾಗಿ ಅವರ ಸಾಧನೆಗಳ ಕುರಿತ ಗೀತ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕಲಾವಿದರಾದ ಗಣೇಶ್ ಬಾವಿಕಟ್ಟೆ, ಅಣ್ಣೇಶ್ವರ ರುಚಿತಾ, ಆರ್.ಟಿ ನಗರ ಪುನೀತ್, ಗಿರೀಶ್, ಟಿ.ಅಗ್ರಹಾರದ ಅಭಿಲಾಷ್, ಪದ್ಮಾ , ತೆಲ್ಲೋಹಳ್ಳಿ ಕೇಶವ ಗೌಡ, ಬೂದಿಗೆರೆ ಭರತ್, ಕುಮಾರಿ ವಾತ್ಸಲ್ಯ, ಅವರು ಶಿವಕುಮಾರ ಸ್ವಾಮೀಜಿ ಅವರ ಸಾಧನೆಗಳ ಕುರಿತ ಗೀತೆಗಳನ್ನು ಹಾಡುವ ಮೂಲಕ ನಮನ ಸಲ್ಲಿಸಿದರು.
ಕಿರುತೆರೆ ನಟ ಡಾ.ದೇವನಹಳ್ಳಿ ದೇವರಾಜ್, ಶಿವಕುಮಾರ ಸ್ವಾಮೀಜಿ ಅವರ ಸೇವೆ ಸ್ಮರಿಸಿ, ಮರಣೋತ್ತರವಾಗಿ ‘ಭಾರತ ರತ್ನ’ ನೀಡಬೇಕು ಎಂದು ಒತ್ತಾಯಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಶ್ರೀನಿವಾಸ್ ಮಾತನಾಡಿದರು. ಗ್ರಾಮದ ಮುಖಂಡರಾದ ಬೀದಿಮನೆ ಅಶ್ವಥಪ್ಪ, ನಾರಾಯಣಸ್ವಾಮಿ, ಆಂಜಿನಪ್ಪ, ನಾರಾಯಣಪ್ಪ ಇದ್ದರು.