ದಾಬಸ್ ಪೇಟೆ: ರಾಷ್ಟ್ರೀಯ ಕಾಲು ಬಾಯಿ ರೋಗ ನಿಯಂತ್ರಣ ಕಾರ್ಯಕ್ರಮದಡಿ ಪಶುವೈದ್ಯ ಇಲಾಖೆ ಹಾಗೂ ಕೆಎಂಎಫ್ ಸಹಯೋಗದಡಿ ನೆಲಮಂಗಲ ತಾಲ್ಲೂಕಿನಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮ ನಡೆಯುತ್ತಿದೆ.
ತಾಲ್ಲೂಕಿನ ಸೋಂಪುರ ಹೋಬಳಿಯ ಚನ್ನೋಹಳ್ಳಿಯಲ್ಲಿಶುಕ್ರವಾರ ಪ್ರತಿ ಮನೆಮನೆಗೂ ತೆರಳಿ ಜಾನುವಾರುಗಳಿಗೆ ಲಸಿಕೆ ಹಾಕಲಾಯಿತು. ಪಶು ವೈದ್ಯಾಧಿಕಾರಿ ಶಿವಪ್ರಸಾದ್ ಮತ್ತು ಕೆಎಂಎಫ್ನ ಸಿಬ್ಬಂದಿ ಗಂಗರೇವಯ್ಯ, ಸತೀಶ್, ನರಸೇಗೌಡ, ರಮೇಶ್, ಗಂಗರಾಜು ಅವರು ಗ್ರಾಮದ ಹಸುಗಳು, ಎತ್ತು, ಎಮ್ಮೆಗಳಿಗೆ ಲಸಿಕೆ ಹಾಕಿದರು.
’ಕಾಲುಬಾಯಿ ರೋಗ ತೀವ್ರತರವಾದ ಸಾಂಕ್ರಾಮಿಕ ರೋಗ. ಇದರಿಂದ ಜಾನುವಾರುಗಳಲ್ಲಿ ಜ್ವರ, ನಿಶ್ಯಕ್ತಿ, ಬಾಯಿ ಹಾಗೂ ಕಾಲುಗಳಲ್ಲಿ ಹುಣ್ಣುಗಳು ಕಾಣಿಸಿಕೊಳ್ಳುತ್ತವೆ. ಹಾಲಿನ ಇಳುವರಿಯೂ ಕಡಿಮೆ ಆಗುತ್ತದೆ. ಸಕಾಲಕ್ಕೆ ಲಸಿಕೆ ಹಾಕಿಸುವುದರಿಂದ ರೋಗ ನಿಯಂತ್ರಿಸಲು ಸಾಧ್ಯವಾಗುತ್ತದೆ’ ಎಂದು ಶಿವಪ್ರಸಾದ್ ಹೇಳಿದರು.