ದೇವನಹಳ್ಳಿ: ನಗರದ ಐತಿಹಾಸಿಕ ಕೋಟೆ ವೇಣುಗೋಪಾಲಸ್ವಾಮಿಗೆ ವಿಜಯದಶಮಿ ಪ್ರಯುಕ್ತ ಶುಕ್ರವಾರ ತಡರಾತ್ರಿವರೆಗೆ ವಿಶೇಷ ಉತ್ಸವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.
ವಿಜಯದಶಮಿ ಪ್ರಯುಕ್ತ ಬೆಳಿಗ್ಗೆಯಿಂದ ಸಂಜೆವರೆಗೆ ಸಾಂಪ್ರದಾಯಿಕವಾಗಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮತ್ತು ಪೂಜೆಗಳನ್ನು ನೇರವೇರಿಸಲಾಯಿತು.
ವಿವಿಧ ಪುಷ್ಪಗಳಿಂದ ಅಲಂಕರಿಸಿದ ರುಕ್ಮಿಣಿ, ಸತ್ಯಭಾಮ ಸಮೇತ ವೇಣುಗೊಪಾಲ ಸ್ವಾಮಿಗೆ ವಾಹನದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ದೇವಾಲಯದ ಆವರಣದಲ್ಲಿ ನೂರಾರು ಭಕ್ತರು ಸರತಿಯ ಸಾಲಿನಲ್ಲಿ ದೇವರ ದರ್ಶನ ಪಡೆದರು.
ಚಿನ್ನಿ ಸರ್ಕಲ್ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಅಪಾರ ಪ್ರಮಾಣದ ಭಕ್ತರು ಸೇರಿದ್ದರು. ಸಂಚಾರ ಪೊಲೀಸ್ ಸಿಬ್ಬಂದಿ ಸಂಚಾರ ನಿಯಂತ್ರಣಕ್ಕೆ ತರಲು ಹರಸಾಹಸ ಪಡುವಂತಾಗಿತ್ತು.
ತಮಟೆ ವಾದನ, ಚಂಡೆ ಮದ್ದಳೆ ವಾದನ ಮತ್ತು ನೃತ್ಯ, ಯಕ್ಷಗಾನ ನೃತ್ಯವನ್ನು ಭಕ್ತರು ಕಣ್ತುಂಬಿಕೊಂಡರು. ಮೆರವಣಿಗೆ ಸಂದರ್ಭದಲ್ಲಿ ಆನೇಕ ಭಕ್ತರು ಉತ್ಸವ ಮೂರ್ತಿಗೆ ಪುಷ್ಪವನ್ನು ಎಸೆದು ಜೈಕಾರ ಕೂಗಿದರು.
ಪರ್ವತಪುರ, ಮರಳುಬಾಗಿಲು, ತಾಲ್ಲೂಕು ಕಚೇರಿ ರಸ್ತೆ, ಸರೋವರ ಬೀದಿ, ಯಲಹಂಕ ಬೀದಿ, ಗಿಡ್ಡಿಬಾಗಿಲು, ಹೊಸಬಸ್ ನಿಲ್ದಾಣ ವಿವಿಧ ಬೀದಿಗಳಲ್ಲಿ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ತಾಲ್ಲೂಕು ಯಾದವ ಸಂಘದ ಎಲ್ಲಾ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಇದ್ದರು.
ಶಮಿಗಿಡದ ರಂಬೆಗೆ ದಂಡಾಧಿಕಾರಿ ಪೂಜೆ: ತಾಲ್ಲೂಕು ದಂಡಾಧಿಕಾರಿ ಎಂ.ರಾಜಣ್ಣ ವಾರ್ಷಿಕ ಸಂಪ್ರದಾಯದಂತೆ ಪುಟ್ಟಪ್ಪನ ಗುಡಿ ಬೀದಿಯ ಪಿತಾಂಬರ ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗ ಶಮಿಗಿಡದ ರಂಬೆಗೆ ಹಾಗೂ ಬಾಳೆಕಂದುವಿಗೆ ಪೂಜೆ ಸಲ್ಲಿಸಿ ಅಂಬು ಎಸೆದರು. ತಾಲ್ಲೂಕು ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಗರದ ಬೋವಿ ಕಾಲೊನಿಯಲ್ಲಿ ಸಾಂಪ್ರದಾಯಕ ವಿಜಯದಶಮಿ ಪ್ರಯುಕ್ತ ಮಾರಮ್ಮದೇವಿಗೆ ವಿಶೇಷ ಪೂಜೆ ನಡೆಸಲಾಯಿತು. ನಂತರ ಶಮಿರಂಬೆ ಪೂಜೆ ಮತ್ತು ಅಂಬು ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಅನಂತಕುಮಾರಿ, ಕಾಂಗ್ರೆಸ್ ಮುಖಂಡ ಚಿನ್ನಪ್ಪ ಪಾಲ್ಗೊಂಡಿದ್ದರು.