ಆನೇಕಲ್:‘ಶಾಲೆಗೊಂದು ವನ ಮಗುವಿಗೊಂದು ಗಿಡ’ ಎಂಬಂತೆ ಪ್ರತಿಯೊಂದು ಮಗುವು ಗಿಡಗಳನ್ನು ಬೆಳೆಸಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಬೇಕು ಎಂದು ಮುತ್ತಾನಲ್ಲೂರು ನೇತಾಜಿ ಪ್ರೌಢ ಶಾಲೆಯ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ರೆಡ್ಡಿ ತಿಳಿಸಿದರು.
ತಾಲ್ಲೂಕಿನ ಮುತ್ತಾನಲ್ಲೂರು ನೇತಾಜಿ ಪ್ರೌಢ ಶಾಲೆಯಲ್ಲಿ ನಾಗನಾಥಪುರದ ಭಾಷ್ ಆಟೋಮೆಟಿವ್ ಎಲೆಕ್ಟ್ರಾನಿಕ್ಸ್ ಇಂಡಿಯಾ ಕಂಪನಿ ಹಾಗೂ ಬಾಷ್ ಇಂಡಿಯಾ ಪ್ರತಿಷ್ಠಾನ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮ ಹಾಗೂ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.
ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಭಾಗಿಯಾಗಿ ಗಿಡಗಳನ್ನು ನೆಡುವ ಮೂಲಕ ಶಾಲಾವನಗಳನ್ನು ನಿರ್ಮಿಸುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ನೇತಾಜಿ ಶಾಲೆಯಲ್ಲಿ ಕಂಪನಿಗಳ ಸಹಕಾರದಿಂದ ಗಿಡ ನೆಡಲಾಗಿದೆ ಎಂದರು.
ಗ್ರಾಮಗಳಲ್ಲಿ ಖಾಲಿಯಿರುವ ಸರ್ಕಾರಿ ಜಾಗಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ನೆರವು ನೀಡಬೇಕು ಎಂದರು.
ಬಾಷ್ ಪ್ರತಿಷ್ಠಾನದ ಸಮುದಾಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ರಾವ್ ಮಾತನಾಡಿ, ವಿವಿಧ ಶಾಲೆಗಳಲ್ಲಿ 1 ಲಕ್ಷ ಗಿಡ ನೆಡುವ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದರು.
ಕಂಪನಿ ಹಾಗೂ ಪ್ರತಿಷ್ಠಾನ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಶಾಲೆಗಳಿಗೆ ಗಿಡಗಳನ್ನು ಪೂರೈಕೆ ಮಾಡಿ ಅವುಗಳನ್ನು ಬೆಳೆಸಲು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬ ವಿದ್ಯಾರ್ಥಿಗೂ ಗಿಡವನ್ನು ನೀಡಲಾಗಿದೆ. ಉತ್ತಮವಾಗಿ ಗಿಡ ಬೆಳೆಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಬಹುಮಾನ ನೀಡಲಾಗುವುದು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಪುಷ್ಪಮ್ಮ, ಮುತ್ತಾನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೌರಮ್ಮ, ಸದಸ್ಯೆ ಸುಜಾತ ಚಿನ್ನಪ್ಪ, ಬಾಷ್ ಕಂಪನಿಯ ಸಿಎಸ್ಆರ್ ವಿಭಾಗದ ಸಂಯೋಜಕ ನರಸಿಂಹ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಕೆ. ಗವಿರಂಗಯ್ಯ ಹಾಜರಿದ್ದರು.