ದೇವನಹಳ್ಳಿ: ‘ಪರಂಪರೆಯ ಪ್ರತೀಕವಾಗಿರುವ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಕಲೆಗಳನ್ನು ಸ್ಥಳೀಯ ಕಲಾವಿದರಿಂದ ಉಳಿಸಲು ಸಾಧ್ಯವೆಂದು’ ನಾಟಕ ಮತ್ತು ಜಾನಪದ ನೃತ್ಯ ಸ್ವರ್ಧೆ ಜಿಲ್ಲಾ ಸಂಚಾಲಕ ದೇವನಹಳ್ಳಿ ದೇವರಾಜ್ ತಿಳಿಸಿದರು .
ದೇವನಹಳ್ಳಿ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ ಮಂಗಳವಾರ ಕನ್ನಡ ಮತ್ತು ಸಾಂಸ್ಕೃತಿಕ ನಿರ್ದೇಶನಾಲಯ ಮತ್ತು ಶಿವಮೊಗ್ಗ ರಂಗಾಯಣ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯಗಳ ಸ್ವರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಿರ್ದೇಶನಾಲಯ ವತಿಯಿಂದ ರಾಜ್ಯದ 4 ವಿಭಾಗದ ವ್ಯಾಪ್ತಿಯಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಬರುವ ತಾಲ್ಲೂಕಿನ ವಿವಿಧ ಕಾಲೇಜು ವಿದ್ಯಾರ್ಥಿಗಳನ್ನು ಸ್ಪರ್ಧೆ ನಡೆಸಿ ಅಯ್ಕೆ ಮಾಡಿಕೊಂಡ ನಂತರ ಜಿಲ್ಲಾ ಮಟ್ಟದಲ್ಲಿ ಸ್ಪರ್ಧೆ ನಡೆಸಲಾಗುತ್ತಿದೆ.
ಇಲ್ಲಿ ಆಯ್ಕೆಗೊಳ್ಳುವ ಪ್ರತಿಭಾನ್ವಿತ ಕಲಾವಿದರು ರಾಜ್ಯ ಮಟ್ಟದಲ್ಲಿ ನಡೆಯುವ ಸ್ವರ್ಧೆಗೆ ಭಾಗವಹಿಸಬೇಕು ಎಂದರು. ಸ್ಥಳೀಯ ಯುವ ಪ್ರತಿಭೆಗಳಿಗೆ ಇದೊಂದು ಸುವರ್ಣವಕಾಶವಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ರಂಗಭೂಮಿ ಕಲಾವಿದರ ಸಂಘ ಜಿಲ್ಲಾ ಅಧ್ಯಕ್ಷ ರಬ್ಬನಹಳ್ಳಿ ಡಿ.ಕೆಂಪಣ್ಣ, ಕಲೆಯ ನೆಲದಡಿ ಅನೇಕ ಪ್ರತಿಭಾನ್ವಿತ ಕಲಾವಿದರಿದ್ದಾರೆ, ವೇದಿಕೆಗಳು ರಂಗ ಸಜ್ಜಿಕೆ ನಿರಂತರವಾಗಬೇಕು ಎಂದರು.
ಜನಪದ ಮತ್ತು ರಂಗ ಕಲೆಗಳು ಸಮಾಜದ ಪರಂಪರೆಯ ಪೀಳಿಗೆಯ ಸಂಪತ್ತು, ಜೋಪಾನವಾಗಿ ಕಾಯ್ದುಕೊಂಡು ಮುಂದಿನ ಪೀಳಿಗೆಗೆ ಮೀಸಲಿಡುವ ಗುರುತರ ಜವಾಬ್ದಾರಿ ಯುವ ಕಲಾವಿದರ ಮೇಲಿದೆ. ಟಿವಿ ಮಾಧ್ಯಮ, ಕಿರುತೆರೆ ಸೇರಿದಂತೆ ವಿವಿಧ ಕಾರಣಗಳಿಂದ ಕಲೆಗಳು ನಶಿಸಿಹೊಗುತ್ತಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಚಿ.ಮಾ. ಸುಧಾಕರ್ ಮಾತನಾಡಿ, ದೇಶ ಮತ್ತು ರಾಜ್ಯದ ಪ್ರಾದೇಶಿಕ ಕಲೆ ಸಂಸ್ಕೃತಿ ಪಾಶ್ಚಿಮಾತ್ಯದ ಕಡೆಗೆ ವಾಲುತ್ತಿದೆ. ಕಲಾವಿದರಲ್ಲಿ ಸಮರ್ಪಣಾ ಭಾವನೆ ಇರುತ್ತದೆ. ಅಭ್ಯಾಸ, ನಿರಂತರ ಪರಿಶ್ರಮ, ತೊಡಗಿಸಿಕೊಳ್ಳುವ ಆಸಕ್ತಿ ಇರಬೇಕು, ಇಂದಿನ ಪರಿಸ್ಥಿತಿಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶವಿದೆ, ಜನಪದ, ರಂಗಕಲೆ,ಸಂಸ್ಕೃತಿ, ಸಾಹಿತ್ಯದ ತಳಹದಿಯಾಗಿದೆ ಎಂದರು.
‘ನೀನಾಸಂ’ ಕಲಾವಿದೆ ಅಕ್ಷತಾ, ಚಿತ್ರಮಂದಿರ ಮಾಲೀಕ ಕೃಷ್ಣ ಮೂರ್ತಿ ಮಾತನಾಡಿದರು. ರಂಗಾಯಣ ನಿರ್ದೇಶಕ ಬಲವಂತ್ರಾಮ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕಿ ಆರ್ಎನ್ ಸುಶೀಲ, ಅಂಕಣಕಾರ ಚಂದ್ರೇಗೌಡ, ವಾಸವಿ ಕ್ಲಬ್ ಅಧ್ಯಕ್ಷ ಸತೀಶ್ ಕುಮಾರ್, ಪರಿವರ್ತನಾ ಕಲಾ ಸಂಸ್ಥೆ ಅಧ್ಯಕ್ಷ ಮೂರ್ತಿ, ಉಪಾಧ್ಯಕ್ಷ ವೈ.ಎಸ್ ಸ್ವಾಮಿ ಉಪಸ್ಥಿತರಿದ್ದರು.
*
ಸಾಂಸ್ಕೃತಿಕ ಇಲಾಖೆ ಒಂದು ಪೌರಾಣಿಕ ನಾಟಕ ಪ್ರದರ್ಶನಕ್ಕೆ ನೀಡುವ ಇಪ್ಪತ್ತು ಸಾವಿರ ಸಾಕಾಗದು, ಒಂದು ನಾಟಕಕ್ಕೆ ಕನಿಷ್ಠ ಒಂದೂವರೆ ಲಕ್ಷ ವೆಚ್ಚವಾಗುತ್ತದೆ
-ರಬ್ಬನಹಳ್ಳಿ ಡಿ.ಕೆಂಪಣ್ಣ, ರಂಗಭೂಮಿ ಕಲಾವಿದರ ಸಂಘ ಜಿಲ್ಲಾ ಘಟಕದ ಅಧ್ಯಕ್ಷ
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.