ವಿಜಯಪುರ: ಕಲಿಕಾರ್ಥಿಗಳಲ್ಲಿ ಆತ್ಮವಿಶ್ವಾಸ, ದೃಢನಿರ್ಧಾರ ಮಾಡುವ ಶಕ್ತಿ, ಕಲಿಯುವುದರಲ್ಲಿ ನಿರಂತರ ಆಸಕ್ತಿ, ಗುರಿ ತಲುಪುವ ಕಠಿಣ ಛಲವಿದ್ದರೆ ಏನನ್ನು ಬೇಕಾದರೂ ಸಾಧಿಸಿ ಫಲವನ್ನು ನಿರೀಕ್ಷಿಸಬಹುದು ಎಂದು ಸರಿಗಮಪ ಲಿಟಲ್ಚಾಂಪ್ಸ್ ಖ್ಯಾತಿಯ ಸುಪ್ರಿಯಾ ಜೋಷಿ ಹೇಳಿದರು.
ಪಟ್ಟಣದ ಸುಬ್ಬಮ್ಮಚನ್ನಪ್ಪ ಸಮುದಾಯಭವನದಲ್ಲಿ ಇನ್ನರ್ವೀಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಲಿಕೆಯೊಂದಿಗೆ ಮಕ್ಕಳು ಕ್ರೀಡೆ, ಸಂಗೀತದಂತಹ ಆಸಕ್ತಿದಾಯಕ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಳ್ಳಬೇಕು. ಅದರಿಂದಾಗಿ ಮಕ್ಕಳಲ್ಲಿ ಬಿಡುವಿನ ವೇಳೆಯ ಸದುಪಯೋಗದ ಅರಿವು ಮೂಡುತ್ತದೆ. ಮನಸ್ಸಿನ ಕೇಂದ್ರೀಕರಣದ ಮೂಲಕ ಜ್ಞಾಪಕಶಕ್ತಿಯನ್ನು ವೃದ್ಧಿಸಿ ಇತರೆ ವಿಷಯಗಳ ಕಲಿಕೆಗೆ ಅದು ಸಹಕಾರಿಯಾಗುತ್ತದೆ ಎಂದರು.
ಇನ್ನರ್ವೀಲ್ಕ್ಲಬ್ ಅಧ್ಯಕ್ಷೆ ದೀಪಾ ಮುರಳೀಧರ್ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ಅರಿವನ್ನು ಜಾಗೃತಗೊಳಿಸಿ ಅವರಲ್ಲಿರುವ ಸುಪ್ತಪ್ರತಿಭೆಯ ಅನಾವರಣಕ್ಕೆ ಪೋಷಕರು ಸೂಕ್ತ ವೇದಿಕೆಗಳನ್ನು ಕಲ್ಪಿಸಿಕೊಡಬೇಕು. ಮಕ್ಕಳು ಆಸಕ್ತ ಕ್ಷೇತ್ರಗಳಲ್ಲಿ ಸಾಧನೆಮಾಡಲು ಪೋಷಕರ ಪ್ರೋತ್ಸಾಹದ ಅಗತ್ಯವಿದೆ ಎಂದರು.
ಸುಪ್ರಿಯಾ ಜೋಷಿ, ಮಧುಚರಣ್, ಸ್ವಾತಿಲಕ್ಷ್ಮಿ ಮತ್ತಿತರರಿಂದ ಗೀತಗಾಯನ ಮತ್ತು ನೃತ್ಯಕಾರ್ಯಕ್ರಮಗಳು ಜರುಗಿದವು. ಸುಪ್ರಿಯಾ ಜೋಷಿ ಅವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು. ಕೋರಮಂಗಲ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಶ್ಯಾಮಲಾ ಅವರನ್ನು ಜೇಸಿಐ ಸಂಸ್ಥೆಯಿಂದ ಸನ್ಮಾನ ಅಭಿನಂದಿಸಿದರು.
ಇನ್ನರ್ವೀಲ್ ಕ್ಲಬ್ ಕಾರ್ಯದರ್ಶಿ ಚಂದ್ರಕಲಾ ರುದ್ರಮೂರ್ತಿ, ಮಾಜಿ ಅಧ್ಯಕ್ಷೆ ರಾಧಚಂದ್ರಪ್ಪ, ಭಾರತಿ ಶಿವಪ್ರಸಾದ್, ಸಲಹೆಗಾರ್ತಿ ಶೈಲಾ, ವೀಣಾ ನಟಶೇಖರ್, ಮಾಲತಿ ಆನಂದ್ಕುಮಾರ್, ಮಹಂತಿನ ಮಠದ ಅಧ್ಯಕ್ಷೆ ಶೀಲಾರಾಣಿ ಸುರೇಶ್, ರೋಟರಿ ಸಂಘದ ಪದಧಿಕಾರಿಗಳು, ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.