ದೇವನಹಳ್ಳಿ: ಮುಂಬರುವ ದಿನಗಳಲ್ಲಿ ರಾಜ್ಯವ್ಯಾಪಿಯಾಗಿ ಬಿಡುಗಡೆಗೆ ಸಜ್ಜಾಗಿರುವ ಬಾಹುಬಲಿ–2 ಚಲನಚಿತ್ರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ವತಿಯಿಂದ ತೀವ್ರ ವಿರೋಧಕ್ಕೆ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಕ.ರ.ವೇ ತಾಲ್ಲೂಕು ಘಟಕದ ಅಧ್ಯಕ್ಷ ಗಜೇಂದ್ರ ತಿಳಿಸಿದರು.
ದೇವನಹಳ್ಳಿ ಪ್ರವಾಸಿ ಮಂದಿರದಲ್ಲಿ ಬಾಹುಬಲಿ–2 ಚಲನಚಿತ್ರಕ್ಕೆ ವಿರೋಧ ಮತ್ತು ನೂತನ ಪದಾಧಿಕಾರಿಗಳ ನೇಮಕ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾವೇರಿ ನೀರು ಹಂಚಿಕೆ ವಿಷಯದಲ್ಲಿ ಬಾಹುಬಲಿ ಚಿತ್ರ ನಟ ಸತ್ಯರಾಜ್ ಕನ್ನಡಿಗರನ್ನು ನಾಯಿ ನರಿಗಳಿಗೆ ಮತ್ತು ಇತರೆ ಕಾಡು ಮೃಗಗಳಿಗೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ. ನಾಡು ನುಡಿ ನೆಲ ಜಲದ ಬಗ್ಗೆ ಹೋರಾಟ ನಡೆಸುತ್ತಿರುವ ಸ್ವಾಭಿಮಾನಿ ಕನ್ನಡಿಗರನ್ನು ಅವಮಾನ ಮಾಡಿ ಕೆಣಕುವ ಪ್ರಯತ್ನ ಮಾಡಿದ್ದಾರೆ. ರಾಜ್ಯದ ಯಾವುದೆ ಚಿತ್ರಮಂದಿರದಲ್ಲಿ ಬಿಡುಗಡೆಗೆ ಅವಕಾಶ ನೀಡಿಲ್ಲ ಎಂದರು.
ಕ.ರ.ವೇ ಜಿಲ್ಲಾ ಉಸ್ತುವಾರಿ ಅಶ್ವಥ್ಗೌಡ ಮತ್ತು ವಿ.ಬಾಬು, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹರೀಶ್ ಕುಮಾರ್, ವಿಜಯಪುರ ಹೋಬಳಿ ಘಟಕ ಅಧ್ಯಕ್ಷ ಲೋಕೇಶ್, ತಾಲ್ಲೂಕು ರೈತ ಘಟಕ ಅಧ್ಯಕ್ಷ ಕೃಷ್ಣಪ್ಪ, ಕಾರ್ಮಿಕ ಘಟಕ ಅಧ್ಯಕ್ಷ ಹರೀಶ್, ವಿದ್ಯಾರ್ಥಿ ಘಟಕ ಅಧ್ಯಕ್ಷ ಸಾಗರ್, ಯುವ ಘಟಕ ಅಧ್ಯಕ್ಷ ಜಾಲಿಗೆ ಮಧು, ಕಾರ್ಯದರ್ಶಿ ಶ್ರೀನಿವಾಸ್, ಕಾರ್ಮಿಕ ಘಟಕ ಉಪಾಧ್ಯಕ್ಷ ಕೆಂಪೇಗೌಡ ಉಪಸ್ಥಿತರಿದ್ದರು.
ನೂತನ ಪದಾಧಿಕಾರಿಗಳು: ಕ.ರ.ವೇ ತಾಲ್ಲೂಕು ಸಂಚಾಲಕ ದಾನೇಶ್ ಕುಮಾರ್, ರೈತ ಘಟಕ ಉಪಾಧ್ಯಕ್ಷ ರಮೇಶ್, ಯುವ ಘಟಕ ಉಪಾಧ್ಯಕ್ಷ ಚಂದನ್.