ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ | 7,228 ಪಡಿತರ ಚೀಟಿಗಳ ವಿರುದ್ಧ ಕ್ರಮ, ₹ 17.36 ಲಕ್ಷ ದಂಡ ಸಂಗ್ರಹ

Last Updated 3 ಡಿಸೆಂಬರ್ 2019, 20:30 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವಬಿಪಿಎಲ್ ಪಡಿತರ ಚೀಟಿಗಳನ್ನು ಅನಧಿಕೃತವಾಗಿ ಪಡೆದಿರುವ ‘ಆರ್ಥಿಕವಾಗಿ ಸಬಲರಾದವರ’ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕಾರ್ಯಚರಣೆಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಮುಂದುವರಿಸಿದೆ.

ಆಗಸ್ಟ್‌ನಿಂದ ಇಲ್ಲಿವರೆಗೆ ಒಟ್ಟು ಅನರ್ಹ ಪಡಿತರ ಚೀಟಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 887 ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಸರ್ಕಾರದ ಎಚ್ಚರಿಕೆ ಹಿನ್ನೆಲೆಯಲ್ಲಿ 2,703 ಮಂದಿ ತಾವು ಪಡೆದುಕೊಂಡಿದ್ದ ಚೀಟಿಗಳನ್ನು ಇಲಾಖೆಗೆ ವಾಪಸ್ ಮಾಡಿದ್ದಾರೆ. 1,796 ಮಂದಿಗೆ ಬಿ‍ಪಿಎಲ್‌ ಕಾರ್ಡ್‌ಗಳನ್ನು ಎಪಿಎಲ್‌ಗೆ ಪರಿವರ್ತಿಸಲಾಗಿದೆ. 1,842 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಒಟ್ಟು ₹ 17.36 ಲಕ್ಷ ದಂಡ ವಿಧಿಸಲಾಗಿದೆ. ಈ ಮೂಲಕ ಅನರ್ಹ ಫಲಾನುಭವಿಗಳಿಗೆ ‘ಬಿಸಿ’ ಮುಟ್ಟಿಸಲಾಗಿದೆ.

ಸರ್ಕಾರಿ ನೌಕರರ ಬಳಿಯೂ ಬಿಪಿಎಲ್ ಕಾರ್ಡ್

‘ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೀಡುವ ಬಿಪಿಎಲ್ ಪಡಿತರ ಚೀಟಿಯನ್ನು ಶ್ರೀಮಂತರೂ ಸುಳ್ಳು ಮಾಹಿತಿ ನೀಡಿ ಪಡೆದಿರುವುದು ಬೆಳಕಿಗೆ ಬಂದಿದೆ. ಅಂಥವರು ಕೂಡಲೇ ಚೀಟಿಗಳನ್ನು ಮರಳಿಸಬೇಕು’ ಎಂದು ಸರ್ಕಾರ ಸೂಚಿಸಿತ್ತು. ಅನಧಿಕೃತವಾಗಿ ಬಿಪಿಎಲ್‌ ಪಡಿತರ ಚೀಟಿ ಹೊಂದಿದ್ದವರಲ್ಲಿ ಶಿಕ್ಷಕರು, ಪೊಲೀಸರು, ಹೆಸ್ಕಾಂ ಮೊದಲಾದ ಸರ್ಕಾರಿ ಇಲಾಖೆಗಳ ನೌಕರರೂ ಇರುವುದು ಗೊತ್ತಾಗಿದೆ. ‘ಉದ್ದೇಶಪೂರ್ವಕವಾಗಿ ತೆಗೆದುಕೊಳ್ಳದವರೂ ಇದ್ದಾರೆ. ವಾಪಸ್‌ ಮಾಡಿದವರಲ್ಲಿ ಚಿಕ್ಕೋಡಿ ಮತ್ತು ರಾಯಬಾಗ ತಾಲ್ಲೂಕುಗಳ ಮಂದಿ ಜಾಸ್ತಿ ಇದ್ದಾರೆ’ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

‘ಕೆ.ಜಿ. ಅಕ್ಕಿಗೆ ₹35ರಂತೆ ಸರ್ಕಾರವು ಹಣ ಪಾವತಿಸಿ ದುರ್ಬಲ ಕುಟುಂಬಗಳಿಗೆ ಉಚಿತವಾಗಿ ನೀಡುತ್ತಿದೆ. ಈ ಯೋಜನೆಯ ಲಾಭವನ್ನು ಆರ್ಥಿಕವಾಗಿ ಸದೃಢವಾಗಿರುವ ಕೆಲವು ಕುಟುಂಬಗಳು ಸುಳ್ಳು ಮಾಹಿತಿ ನೀಡಿಯೋ, ಗೊತ್ತಿಲ್ಲದೆಯೋ ಪಡೆಯುತ್ತಿರುವುದು ಕಂಡುಬಂದಿದೆ. ಬಡವರಿಗೆಂದು ಇರುವ ಸೌಲಭ್ಯವನ್ನು ಉಳ್ಳವರೂ ಮೋಸದ ಹಾದಿಯಲ್ಲಿ ಗಳಿಸಿಕೊಳ್ಳುವುದು ಸರಿಯಲ್ಲ. ಹೀಗಾಗಿ, ಕಠಿಣ ಕ್ರಮ ವಹಿಸಲಾಗುತ್ತಿದೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪನಿರ್ದೇಶಕ ಚನ್ನಬಸ‍ಪ್ಪ ಕೊಡ್ಲಿ ‘ಪ್ರಜಾವಾಣಿ’ಗೆ ತಿಳಿಸಿದರು.

ಅನರ್ಹರಿಗೆ ದಂಡ

‘ನಾವು ಪತ್ತೆ ಮಾಡಿದ ಅನರ್ಹರು, ಯಾವಾಗಿನಿಂದ ಎಷ್ಟು ಅಕ್ಕಿಯನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಹಾಕಿ, ಪ್ರಸಕ್ತ ಮಾರುಕಟ್ಟೆ ದರದಂತೆ ದಂಡ ವಿಧಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆ ದಾಖಲಿಸಲೂ ಅವಕಾಶವಿದೆ’ ಎಂದು ಸ್ಪಷ್ಟಪಡಿಸಿದರು.

‘ಸೆಪ್ಟೆಂಬರ್ ಅಂತ್ಯದವರೆಗೆ 1,054 ಮಂದಿ ತಾವಾಗಿಯೇ ಬಂದು ಕಾರ್ಡ್‌ ವಾಪಸ್ ಮಾಡಿದ್ದರು. ಅದಕ್ಕಿಂತಲೂ ಹೆಚ್ಚಿನ ಪ್ರಕರಣಗಳಿರುವ ಮಾಹಿತಿ ಇತ್ತು. ಹೀಗಾಗಿ, ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ಸ್ವಯಂಪ್ರೇರಿತವಾಗಿ ಬಂದು ಮರಳಿಸಿದರೆ ನಿಗದಿತ ದಂಡ ವಿಧಿಸಲಾಗಿದೆ. ಇಲಾಖೆಯಿಂದಲೇ ಪತ್ತೆ ಹಚ್ಚಿದಲ್ಲಿ, ದಂಡ ವಿಧಿಸುವ ಜೊತೆಗೆ ಪ್ರಕರಣವನ್ನೂ ದಾಖಲಿಸಲಾಗುತ್ತದೆ’ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ಬಿಪಿಎಲ್‌ ಕಾರ್ಡ್‌ ಮರಳಿಸಿದವರನ್ನು ಎಪಿಎಲ್‌ ಚೀಟಿಗೆ ಪರಿವರ್ತಿಸಿ ಪರಿಗಣಿಸಲಾಗಿದೆ. ಅವರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ (ಕೆ.ಜಿಗೆ. ತಲಾ ₹15ರಂತೆ) ನೀಡಲಾಗುವುದು. ಆದರೆ, ಅವರು ಮುಂಚಿತವಾಗಿ ಆಸಕ್ತಿ ವ್ಯಕ್ತಪಡಿಸಬೇಕು ಎನ್ನುತ್ತಾರೆ ಅಧಿಕಾರಿಗಳು.

ಅಂಕಿ–ಅಂಶಗಳ ಪ್ರಕಾರ, ರಾಯಬಾಗ, ರಾಮದುರ್ಗ ಹಾಗೂ ಗೋಕಾಕ ತಾಲ್ಲೂಕುಗಳಲ್ಲಿ ಹೆಚ್ಚಿನ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಖಾನಾಪುರ, ರಾಯಬಾಗ ಹಾಗೂ ಗೋಕಾಕ ತಾಲ್ಲೂಕುಗಳಲ್ಲಿ ಹೆಚ್ಚಿನ ದಂಡ ವಿಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT