ಬೆಳಗಾವಿ: ಶಾಲಾ–ಕಾಲೇಜು ತರಗತಿ ಅವಧಿಗೆ ಪೂರಕವಾಗಿ ನಮಗೆ ಹೆಚ್ಚುವರಿ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಲಿಂಗರಾಜ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರಾಣಿ ಚನ್ನಮ್ಮನ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಕಾರರು, ‘ಸರ್ಕಾರವು ‘ಶಕ್ತಿ’ ಯೋಜನೆಯಡಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಬಸ್ಗಳು ಮಹಿಳಾ ಪ್ರಯಾಣಿಕರಿಂದ ಕಿಕ್ಕಿರಿದು ತುಂಬುತ್ತಿದ್ದು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಂದ ನಗರ, ಪಟ್ಟಣಗಳಲ್ಲಿನ ಶಾಲಾ–ಕಾಲೇಜಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕಲಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆಲವೊಮ್ಮೆ ಬಸ್ ಸಿಗದೆ ವಿದ್ಯಾರ್ಥಿಗಳು ಪರೀಕ್ಷೆಯಿಂದಲೇ ವಂಚಿತರಾಗುವಂತಾಗಿದೆ. ಆದರೆ, ಸಾರಿಗೆ ಸಂಸ್ಥೆಯವರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಬೇಡಿಕೆಯಂತೆ ಬಸ್ ಬಿಡುತ್ತಿಲ್ಲ’ ಎಂದು ದೂರಿದರು.
‘ನಗರ ಬಸ್ ನಿಲ್ದಾಣದಿಂದ ಸುಳೇಬಾವಿಗೆ ಈಗಿರುವ ಬಸ್ ಸಾಲುತ್ತಿಲ್ಲ. ಹಾಗಾಗಿ 15 ನಿಮಷಕ್ಕೊಂದು ಬಿಸ್ ಬಿಡಬೇಕು. ಆಗ, ಬಸ್ಗಳಲ್ಲಿನ ದಟ್ಟಣೆ ನೀಗಲಿದ್ದು, ವೇಳಾಪಟ್ಟಿಯಂತೆ ತರಗತಿಗೆ ಹಾಜರಾಗಬಹುದು’ ಎಂದರು. ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮುಖಂಡರಾದ ಪ್ರಶಾಂತ ಶೇಳಕೆರೆ, ಸಚಿನ ಹಿರೇಮಠ, ಮನೋಜ ಪಾಟೀಲ, ಪ್ರಜ್ವಲ ನಾಯಕ, ಯಲ್ಲಪ್ಪ ಬೊಮ್ಮನಹಳ್ಳಿ ಇತರರಿದ್ದರು.