ಗೋಕಾಕ: ‘ಕಕ್ಷಿದಾರರ ನಿರೀಕ್ಷೆಯಂತೆ ವಸ್ತುಸ್ಥಿತಿಯನ್ನು ನ್ಯಾಯಾಲಯಕ್ಕೆ ಮನದಟ್ಟು ಮಾಡುವ ಗುರುತರ ಜವಾಬ್ದಾರಿ ವಕೀಲರ ಮೇಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಸಿ.ಎಂ. ಜೋಶಿ ತಿಳಿಸಿದರು.
ಇಲ್ಲಿನ ವಕೀಲರ ಸಂಘವು ನ್ಯಾಯಾಲಯ ಸಂಕೀರ್ಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಕೀಲರು ಮತ್ತು ಕಾನೂನು ದಿನಾಚರಣೆ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ನಿರಂತರ ಅಧ್ಯಯನದ ಮೂಲಕ ಮಾತ್ರವೇ ಸ್ಪರ್ಧಾತ್ಮಕ ನೆಲೆಗಟ್ಟಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಅಧ್ಯಯನ ಪ್ರವೃತ್ತಿಯನ್ನು ಬಿಡಬಾರದು’ ಎಂದರು.
‘ವಕೀಲಿ ವೃತ್ತಿಯು ಇತರ ಕೆಲಸಗಳಿಗಿಂತಲೂ ವಿಭಿನ್ನ’ ಎಂದು ವಿಶ್ಲೇಷಿಸಿದ ಅವರು, ‘ವಕೀಲರು ವೃತ್ತಿ ನೈಪುಣ್ಯ ಮೈಗೂಡಿಸಿಕೊಂಡು ನ್ಯಾಯದಾನ ವ್ಯವಸ್ಥೆಯ ಭಾಗವಾಗಿರುವ ಲೋಕ ಅದಾಲತ್ಗಳ ಯಶಸ್ಸಿಗೆ ಪ್ರಮುಖ ಪಾತ್ರ ವಹಿಸುವ ಅಗತ್ಯವಿದೆ’ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ 12ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಜಯಕುಮಾರ ಆನಂದಶೆಟ್ಟಿ, ‘ಡಿ.18ರಂದು ಬೃಹತ್ ಲೋಕ ಅದಾಲತ್ ನಡೆಯಲಿದೆ’ ಎಂದರು.
ರಾಜ್ಯ ವಕೀಲರ ಪರಿಷತ್ ಸದಸ್ಯ ವಿನಯ ಮಾಂಗಳೇಕರ ಮಾತನಾಡಿದರು.
ವಕೀಲರ ದಿನದ ನಿಮಿತ್ತ ಸಂಘದ ಸದಸ್ಯರಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಶಸ್ತಿಪತ್ರ ಮತ್ತು ಸ್ಮರಣಿಕೆಗಳನ್ನು ನೀಡಲಾಯಿತು.
ನ್ಯಾಯಾಧೀಶರಾದ ದೀಪಾ ಜಿ., ಶಂಕರ ಕೆ.ಎಂ., ಪ್ರಿಯಾಂಕಾ ಟಿ.ಕೆ. ಮತ್ತು ಶೋಭಾ ಹಾಗೂ ಪರಿಷತ್ ಸದಸ್ಯ ಕೆ.ಬಿ. ನಾಯಿಕ, ಹಿರಿಯ ವಕೀಲರ ಸಮಿತಿ ಅಧ್ಯಕ್ಷ ಬಿ.ಆರ್. ಕೊಪ್ಪ ಉಪಸ್ಥಿತರಿದ್ದರು.
ಎಸ್.ಬಿ. ನಿಶಾನಿಮಠ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಡಿ. ಹುಕ್ಕೇರಿ ಸ್ವಾಗತಿಸಿದರು. ವಕೀಲ ಆರ್.ಎಚ್. ಇಟ್ನಾಳ ಪ್ರಾಸ್ತಾವಿಕ ಮಾತನಾಡಿದರು. ವಕೀಲ ಎ.ವಿ. ಹುಲಗಬಾಳಿ ನಿರೂಪಿಸಿದರು. ವಕೀಲರ ಸಂಘದ ನಿಕಟಪೂರ್ವ ಅಧ್ಯಕ್ಷ ಎಸ್.ವಿ. ದೇಮಶೆಟ್ಟಿ ವಂದಿಸಿದರು.