ತೆಲಸಂಗ: ‘ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯಾಗಿಸಲು ಎಲ್ಲರೂ ಪಕ್ಷ ಮರೆತು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಈ ಮೂಲಕ ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ ಗಿರೀಶ ರಾ. ಬಸರಗಿ ಒತ್ತಾಯಿಸಿದರು.
ಇಲ್ಲಿನ ರೈತ ಸಂಪರ್ಕ ಕೇಂದ್ರಕ್ಕೆ ಈಚೆಗೆ ಭೇಟಿ ನೀಡಿದ್ದ ವೇಳೆ ಮಾತನಾಡಿದ ಅವರು, ‘ಬೆಳಗಾವಿ ದೊಡ್ಡ ಜಿಲ್ಲೆ ಆಗಿರುವುದರಿಂದ ಶೈಕ್ಷಣಿಕ ಜಿಲ್ಲೆಯ ಮಾದರಿಯಲ್ಲಿ ಚಿಕ್ಕೋಡಿಯನ್ನು ಕೃಷಿ ಜಿಲ್ಲೆಯನ್ನಾಗಿಸುವ ಬಗ್ಗೆ ಶಾಸಕ ಪಿ.ರಾಜೀವ ಅವರು ಕೃಷಿ ಸಚಿವ ಬಿ.ಸಿ. ಪಾಟೀಲ ಅವರ ಗಮನಸೆಳೆದಿರುವುದು ಸ್ವಾಗತಾರ್ಹ’ ಎಂದರು.
‘ಜಿಲ್ಲೆಯ ಕಟ್ಟಕಡೆಯ ಗ್ರಾಮದ ರೈತ ಜಿಲ್ಲಾ ಕೇಂದ್ರಕ್ಕೆ ಹೋಗಿ ಬರಲು ದಿನವೇ ಬೇಕಾಗುತ್ತದೆ. ಇದು ಯಾವ ನ್ಯಾಯ? ಇಂತಹ ಅನ್ಯಾಯವನ್ನು ಸಹಿಸಿಕೊಂಡ ರೈತನಿಗೆ ಶಾಸಕರ ಮೂಲಕವೇ ಧ್ವನಿ ಬಂದಿದೆ. ಬೆಳಿಗ್ಗೆ ಹೊರಟು ಜಿಲ್ಲಾ ಕೇಂದ್ರ ತಲಪುವಷ್ಟರಲ್ಲಿ ಕಚೇರಿಯವರು ಮಧ್ಯಾಹ್ನದ ವಿಶ್ರಾಂತಿಗೆ ತೆರಳಿರುತ್ತಾರೆ. ಬಳಿಕ ಯಾವ ಕೆಲಸವೂ ಮುಗಿಯುವುದಿಲ್ಲ. ಹೀಗಾಗಿ ಈ ಭಾಗದ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು’ ಎಂದು ಕೋರಿದರು.
ಮುಖಂಡರಾದ ಕಲ್ಲಪ್ಪ ಸೇಣೂರ, ಮಲಕಪ್ಪ ಅನ್ನೂಲಕರ, ಅಣ್ಣಪ್ಪ ಕೋಟೆ, ಜಕಪ್ಪ ಚಿಬ್ಬಿ ಇದ್ದರು.